ಇಳೆಯ ಸಿರಿ
![ಇಳೆಯ ಸಿರಿ](https://kaananamag.in/wp-content/uploads/2024/06/kavana-Page-copy.jpg)
ಇಳೆಯಿಂದ ಮೊಳಕೆ ಹೊಡೆದು, ಹೊರಬಂತು ಪೈರು
ಆಳ ಅಗಲದಿ ನುಗ್ಗಿ ಮಣ್ಣ ಬಂಧಿಸಿತು ಬೇರು
ಪೈರ ನೋಡಿ ಆಹಾರಕಾಗಿ ಬಂತಲ್ಲ ಕೀಟ
ಕೀಟವನು ಕಂಡ ಹಕ್ಕಿ ಕೇಳಿತು, ನೀನೇ ನನ್ನ ಊಟ!
ವಿಸ್ತಾರವಾಗಿ ಚಾಚಿಕೊಂಡ ತಾರೆಗಳ ರಾಶಿಯ ಮುಗಿಲು
ಒತ್ತೊತ್ತಾಗಿ ದಟ್ಟನೆ ನಿಂತ ಬೆಟ್ಟಗುಡ್ಡಗಳ ಸಾಲು
ಜುಳು ಜುಳು ಹರಿವ ಜಲಧಾರೆಯ ಸೊಬಗು
ಅಲ್ಲಲ್ಲಿ ಜಿಗಿದ ಕಪ್ಪೆ ಮೀನುಗಳ ಆಟವೇ ಬೆರಗು!
ಮಕರಂದವ ತನ್ನಲ್ಲಿ ಅಡಗಿ ಹೂವು ಬೀರಿತು ಕಂಪು
ಅದನರಸಿ ಬಂದ ದುಂಬಿಗಳ ಗಾಯನ ಬಲು ಇಂಪು
ಎಲ್ಲಿ ನೋಡಿದರಲ್ಲಿ ಭೂರಮೆಯ ಸಿಂಗರಿಸಿದ ಹಸಿರು
ಆ ಹಸಿರೇ, ಸಕಲ ಜೀವಿಗಳ ಜೀವದಾ ಉಸಿರು.
ಪ್ರಕೃತಿ ಹಲವು ವಿಸ್ಮಯಗಳ ಆಕರ
ಎಲೈ ಸ್ವಾರ್ಥಿ ಮಾನವ, ನಿನ್ನ ಮನಸೇಕೆ ಇಷ್ಟು ವಿಕಾರ?
ನಿನ್ನಲ್ಲಿದೆಯೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರ?
ಅರಿಯೇ ನೀನು? ಪ್ರಕೃತಿಯೇ ನೀಡುವುದು ಎಲ್ಲದಕ್ಕು ಉತ್ತರ!
ದೀಪಿಕಾ ಬಾಯಿ ಎನ್., ಬೆಂಗಳೂರು ಜಿಲ್ಲೆ
![](https://kaananamag.in/wp-content/uploads/2020/10/photo_2020-10-08_09-54-19.jpg)
M.Sc ( ಗಣಿತ ) ಮುಗಿಸಿ, ನನ್ನಿಷ್ಟ ದಂತೆ ಶಿಕ್ಷಣ ವೃತ್ತಿ ಆರಿಸಿಕೊಂಡು, ಸರ್ಕಾರಿ ಶಾಲಾ ಮಕ್ಕಳಿಗೆ ಸೃಜನಾತ್ಮಕ ಕಲಿಕೆಗೆ ಪೂರಕವಾಗಲು ರಾಮಕೃಷ್ಣ ಮಿಷನ್ ಶಿವನಹಳ್ಳಿ ಯವರು ಆಯೋಜಿಸಿರುವ ಪ್ರೊಜೆಕ್ಟ್ ಮಾಡೂ ನಲ್ಲಿ ಕೆಲಸ ಮಾಡುತ್ತಿದ್ದೇನೆ.
ವಿವಿಧ ಶಾಲೆಯ ಮಕ್ಕಳೊಂದಿಗೆ ಚಟುವಟಿಕೆಗಳ ಮೂಲಕ ವಿಜ್ಞಾನ ಮತ್ತು ಗಣಿತದ ವಿಷಯಗಳನ್ನು ಚರ್ಚಿಸುವುದು ನನ್ನ ವೃತ್ತಿ ಮತ್ತು ಪ್ರವತ್ತಿ ಕೂಡ ಹೌದು .ಚಿಕ್ಕ ಕಥೆಗಳು ಮತ್ತು ಕವನಗಳು ಬರೆಯುವುದು ,ಚಿತ್ರಕಲೆ ನನ್ನ ಹವ್ಯಾಸ ಗಳು.
ಚಿಕ್ಕ ವಯಸ್ಸಿನಿಂದ ಬೆಂಗಳೂರಿನಲ್ಲೆ ಬೆಳೆದ ನನಗೆ ಕಾಡು ಮತ್ತು ಕಾಡು ಪ್ರಾಣಿಗಳ ಬಗ್ಗೆ ಹೆಚ್ಜ್ಚಿನ ಜ್ಞಾನ ಇರಲಿಲ್ಲ. ಆದರೆ ಈಗ ಪರಿಸರ ಕಾಳಜಿ ಹೊಂದಿರುವ ಕೆಲವು ಗೆಳೆಯರೊಂದಿಗೆ ಸೇರಿ ನನಗು ಪ್ರಕೃತಿ ಯ ಬಗ್ಗೆ ಹೆಚ್ಚು ತಿಳಿಯುವ ಕುತೂಹಲ ಬಂದಿದೆ. ಪರ್ವತಾರೋಹಣ, ಪಕ್ಷಿ ವೀಕ್ಷಣೆ, ಛಾಯಗ್ರಹಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದು ನನಗಿಷ್ಟ .