ಕಾನನ

ನಿಸರ್ಗದೆಡೆಗೆ ಪಯಣ

ನಾನೊಂದು ಬೀಜ ರೈತ ಹೊತ್ತು ಬಿತ್ತ ನೆಲದಲಿ;
ಮಣ್ಣಲಿ ಮಣ್ಣಾಗಿ ಮುಳುಗಿದರೂ
ಅವನಾರೋ ಮೇಘರಾಯನ ಸಹವಾಸದಿ
ಟಿಸಿಲೊಡೆದು ಹೊಸ ಬದುಕ ಕಾಣುವಾಸೆ.

ಕಂಡ ಕನಸು ನನಸಾಗಲು ಬೇಕಿದೆ ಪರಿಶ್ರಮ
ಏನಾದರೇನು? ಪೊರೆ ಕಳಚಿ; ಹೊಸ ಜಗವ ನೋಡುವಾಸೆ
ಒಂದೆಲೆ, ಎರಡೆಲೆ, ನಾಲ್ಕೆಲೆಗಳೆಂದು ದ್ವಿಗುಣಿಸಿ
ಗಟ್ಟಿಗೊಳಿಸಿಕೊಳ್ಳುವೆ ನನ್ನಿರುವ.

ಗೆದ್ದು ಬೀಗಬೇಕೆಂಬ ಹಂಬಲವಲ್ಲ
ಗೆದ್ದೇ ಗೆಲ್ಲುವೆನೆಂಬ ನಂಬಿಕೆ ಅಚಲ
ಹರಿತ್ತಿನೊಟ್ಟಿಗೆ ಬೆಸೆದ ಬದುಕ ಪೂರ್ಣ ಜೀವಿಸುವಾಸೆ
ಗಾಳಿ, ಬೆಳಕ, ನೀರನೂಡಿದ ಇಳೆಗೆ ಏನಾದರೂ ನೀಡುವಾಸೆ

ಏನ ನೀಡಲಿ?
ಗಾಳಿಯೂಡುವೆ, ನೆರಳನೀವೆ, ಹೂವನೀವೆ, ಕಾಯನೀವೆ, ಹಣ್ಣನೀವೆ
ಜನ್ಮವಿತ್ತವರಿಗೆ, ಸಹಕಾರವಿತ್ತವರಿಗೆ ಏನಿತ್ತರೂ ಕಡಿಮೆಯೇ?

ಆದರೂ ಕೊಡುವುದರಲ್ಲೇನೋ ಸಾರ್ಥಕವಿದೆ.
ಕೊಟ್ಟು ಪಡೆವ, ಪಡೆದು ಕೊಡುವ ಭಾವವಿದೆ.
ಮತ್ತೆ ಮತ್ತೆ ಬಿತ್ತುವ ಬಿತ್ತವಾಗಿ
ಹೊಸ ಜಗದ ನೇಮದ ಅಸ್ಮಿತೆಯ ಕಾಪಿಟ್ಟುಕೊಳ್ಳುವ ನಿರೀಕ್ಷೆಯಿದೆ.

– ಕಲ್ಪನ ಎಂ.
            ತುಮಕೂರು ಜಿಲ್ಲೆ

ಕಾನನದ ದನಿ ಹರಡಿ

ಅಭಿಪ್ರಾಯ ತಿಳಿಸಿ

Your email address will not be published. Required fields are marked *

error: Content is protected.