ಕಾನನ ಪತ್ರಿಕೆಯ ವಿಶೇಷ ಕೊಡುಗೆದಾರರು
ಕೃಷ್ಣ ನಾಯಕ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪಕ್ಕದಲ್ಲಿನ ಒಂದು ಪುಟ್ಟ ಹಳ್ಳಿಯವರಾದ ಇವರು ಹವ್ಯಾಸಿ ಬರಹಗಾರರರು. ಬಿ. ಎಸ್ಸಿ ಪದವೀದರರಾದ ಇವರಿಗೆ ಹುಟ್ಟಿನಂದಿಲಿಂದಲೂ ಪ್ರಾಣಿ, ಪಕ್ಷಿ, ಕ್ರಿಮಿ-ಕೀಟಗಳಲ್ಲಿ ವಿಶೇಷ ಪ್ರೀತಿ. 2011ರ ‘ಹಸು ಕಂದನ ಮರಣ’ ಎಂಬ ಕವನದಿಂದ ಶುರುವಾದ ಇವರ ಕಾನನ ಪತ್ರಿಕೆಯ ಒಡನಾಟವು ಇಲ್ಲಿನ ತನಕ ಸರಾಗವಾಗಿ ನಡೆದು ಬಂದಿರುತ್ತದೆ. 2011 ರಿಂದ ಇವರು ಕಾನನ ಪತ್ರಿಕೆಗೆ ಸುಮಾರು 36 ಕವನಗಳನ್ನು ನೀಡಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಗೆ, ದಶಕಗಳಿಂದ ಕಾನನ ಮಾಸ ಪತ್ರಿಕೆಗೆ ನೀಡಿರುವ ಅಪಾರ ಸಹಕಾರಕ್ಕೆ ಇವರನ್ನು ತಂಡವು ವಿಶೇಷ ಕಾನನ ಕೊಡುಗೆದಾರರು ಎಂದು ಗುರುತಿಸಿ ಕಾನನ ಸಿರಿ ಲೇಖನ ಸ್ಪರ್ಧೆ ಮತ್ತು ಕಾನನ ಕೂಟ 2026ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
| ಕಾನನ ತಂಡವು ನನ್ನ ಕವನಗಳನ್ನು ಗುರುತಿಸಿ ಕೊಡುಗೆದಾರನಾಗಿ ಸ್ವೀಕರಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಿದ್ದು ನನ್ನ ಜೀವನದಲ್ಲೊಂದು ಮರೆಯಲಾಗದ ಕ್ಷಣವಾಗಿದೆ. ಇದರ ಬಗ್ಗೆ ನಾನು ಎಂದು ಯೋಚಿಸಿರಲಿಲ್ಲ ಹಾಗೂ ಊಹಿಸಿರಲಿಲ್ಲ. ಕಾನನ ಬಳಗಕ್ಕೆ ನನ್ನ ತುಂಬು ಹೃದಯದಿಂದ ಕೃತಜ್ಞತೆಯನ್ನು ಹೇಳಬಯಸುತ್ತೇನೆ. – ಕೃಷ್ಣ ನಾಯಕ್ |

ಜೈಕುಮಾರ್ ಆರ್.
ಹಲವಾರು ವರ್ಷಗಳಿಂದ ಕಾನನ ಪತ್ರಿಕೆಯಲ್ಲಿ ಪ್ರತೀ ತಿಂಗಳು ಪ್ರಕಟವಾಗುತ್ತಿರುವ ಕಾನನ ಪತ್ರಿಕೆಯ ವಿದ್ಯಾರ್ಥಿಗಾಗಿ ವಿಜ್ಞಾನ ಎಂಬ ಅಂಕಣದ ಲೇಖಕರಾದ ಇವರು ಇಂಜಿನಿಯರಿಂಗ್ ಪದವಿಯನ್ನು ಹೊಂದಿದ್ದಾರೆ. ಫೆಬ್ರವರಿ 2016ರಲ್ಲಿ ಕಾನನ ಪತ್ರಿಕೆಗೆ ತಮ್ಮ ಮೊದಲ ಲೇಖನವನ್ನು ಕೊಡಲು ಶುರುಮಾಡಿದ ಇವರು ಇಲ್ಲಿಯ ತನಕ 117 ಲೇಖನಗಳನ್ನು ನೀಡಿದ್ದಾರೆ. ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ವಿಜ್ಞಾನದ ಹೊಸ ಅಚ್ಚರಿಯ ಆವಿಷ್ಕಾರಗಳನ್ನು ಸಾಮಾನ್ಯ ಓದುಗರಿಗೆ, ವಿದ್ಯಾರ್ಥಿಗಳಿಗೆ ಲೇಖನದ ಮುಖೇನ ತಿಳಿಸುವುದು ಇವರ ವಿಶೇಷತೆ. ತಮ್ಮ ಸುಲಭ ಭಾಷೆಯಲ್ಲಿಯೇ ಎಷ್ಟೋ ಗಾಢವಾದ ವಿಚಾರಗಳನ್ನು ತಿಳಿಸುತ್ತಾ ಬಂದಿದ್ದಾರೆ. ಇವರ ಈ ಅವಿರತ ಸೇವೆಗೆ ಇವರನ್ನು ತಂಡವು ವಿಶೇಷ ಕಾನನ ಕೊಡುಗೆದಾರರು ಎಂದು ಗುರುತಿಸಿ ಕಾನನ ಸಿರಿ ಲೇಖನ ಸ್ಪರ್ಧೆ ಮತ್ತು ಕಾನನ ಕೂಟ 2026ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
| ಕನ್ನಡದಲ್ಲಿ ಹೊರಬರುವ ಪರಿಸರ ಲೇಖನಗಳನ್ನು ಒಳಗೊಂಡ ಇ-ಮಾಸಿಕ ಕಾನನ. ಇದರಲ್ಲಿನ ವಿದ್ಯಾರ್ಥಿಗಾಗಿ ವಿಜ್ಞಾನ ಅಂಕಣದಲ್ಲಿ ಕೆಲ-ಹಲವು ಲೇಖನಗಳಲ್ಲಿ ನನ್ನ ಅನುಭವ ಸಹಿತ ಅನುವಾದಾಕ್ಷರಗಳನ್ನು ಚುಮುಕಿಸಲು ಕಾನನ ತಂಡ ಸುದೀರ್ಘ ಹತ್ತು ವರ್ಷಗಳ ಅವಕಾಶವನ್ನು ನೀಡಿದೆ. ಅದನ್ನು ಅಷ್ಟೇ ನಿಷ್ಠೆಯಿಂದ ಬಳಸಿಕೊಂಡೆ ಎಂದು ಭಾವಿಸುತ್ತೇನೆ. ನನ್ನ ಕಾನನ ಲೇಖನಗಳ ಜೊತೆಗಿನ ಈ ದಶಕದ ಪಯಣ ಅತ್ಯಂತ ವಿಭಿನ್ನ ಅನುಭವ ಮತ್ತು ಸಂತಸವನ್ನು ತಂದಿದೆ. ಜೊತೆಗೆ ಮೊನ್ನೆಯ ಕಾನನ ಕೂಟದಲ್ಲಿ ಅದನ್ನು ಪರಿಗಣಿಸಿ ಸನ್ಮಾನಿಸಿದ್ದಕ್ಕೆ ಇಡೀ ಕಾನನ ತಂಡಕ್ಕೆ ನನ್ನ ಅನುವಾದ ರಹಿತ ಧನ್ಯವಾದಗಳನ್ನು ತಲುಪಿಸಲು ಇಚ್ಚಿಸುತ್ತೇನೆ. – ಜೈಕುಮಾರ್ ಆರ್. |
