ಮಿತಿ ಮೀರಿದ ಬಳಕೆ ದಿನ

ಮಿತಿ ಮೀರಿದ ಬಳಕೆ ದಿನ

ಏನೆಂದು ನಾ ಹೇಳಲಿ… ಮಾನವನಾಸೆಗೆ ಕೊನೆ ಎಲ್ಲಿ‌…. ಎಂಬ ಅಣ್ಣಾವ್ರ(ಡಾ. ರಾಜ್ ಕುಮಾರ್) ಹಾಡು  ಇಂದಿಗೂ ಎಂದಿಗೂ ಪ್ರಸ್ತುತ. ಆಸೆಯೇ ದುಃಖದ ಮೂಲ ಎಂದು ಬುದ್ಧನಾದಿಯಾಗಿ ಹಲವು ಮಹಾಶಯರು ಪ್ರತಿಪಾದಿಸಿದರೂ ನಾವಿರುವುದೇ ಹೀಗೆ ಎಂಬ ಧೋರಣೆಯನ್ನು ಮುಂದುವರೆಸಿಕೊಂಡು ಬಂದ ಪರಿಣಾಮ ನಾವು ಈಗಾಗಲೇ ವೈಯಕ್ತಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರ ಪರಿಣಾಮವಾಗಿ ನಮ್ಮ ಸಾಮಾಜಿಕ, ಆರ್ಥಿಕ, ಆರೋಗ್ಯದ ಮೇಲೆ ಹಲವಾರು ದುಷ್ಪರಿಣಾಮಗಳನ್ನು  ಅನುಭವಿಸುತ್ತಿದ್ದೇವೆ.

ಇದು ಇಲ್ಲಿಗೇ ನಿಂತಿಲ್ಲ  ನಾವು ಮಾಡಿರುವ ಅವಾಂತರಗಳಿಂದ  ಪರಿಸರ ಮತ್ತು ಜಗದ ಮೇಲೆ ಬೀರಿರುವ ಪರಿಣಾಮ ನೆನೆದರೆ ಹಗಲಿನಲ್ಲಿಯೂ ಬೆಚ್ಚಿ ಬೀಳುವಂತಾಗುತ್ತದೆ. ಹಸಿರು ಮನೆ ಪರಿಣಾಮ, ಎಲ್ ನಿನೊ ಲಾ ನಿನೊ, ಜಾಗತಿಕ ತಾಪಮಾನ, ಓಜೋನ್ ಪದರದ ಹಾನಿಯಾಗಿರುವುದು ಒಂದೇ ಎರಡೆ… ಪಟ್ಟಿ ಮಾಡುತ್ತಾ ಹೋದರೆ ಹನುಮಂತನ ಬಾಲದಂತೆ ಬೆಳೆದೀತು. ಇವೆಲ್ಲವುಗಳ ಪರಿಣಾಮವಾಗಿ ಋತುವಿನಲ್ಲಿ ಅದಲು ಬದಲು, ಅಧಿಕ ತಾಪಮಾನ, ದಿನಕ್ಕೊಂದು ಹೊಸ ರೋಗದ ಸೇರ್ಪಡೆ, ಅನ್ನಾಹಾರಕ್ಕೆ ಹಾಹಾಕಾರ, ಪ್ರಾಣಿ ಮಾನವ ಸಂಘರ್ಷ, ಪರಿಸರ ಮಾಲಿನ್ಯದಂತಹ ಅಪಸವ್ಯಯಗಳು ಮಾಮೂಲಾಗಿಬಿಟ್ಟಿವೆ. ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಮಿತಿ ಮೀರಿದ ಬಳಕೆ ದಿನ (Earth overshoot day) ಎಂಬ ದಿನವನ್ನು ಆಚರಿಸಲಾಗುತ್ತದೆ.

ಹಾಗಾದರೆ ಮಿತಿಮೀರಿದ ಬಳಕೆ ದಿನ ಎಂದರೇನು?

ಜಗತ್ತಿನ ಎಲ್ಲಾ ಜನರು ಬಳಸಲು ಯೋಗ್ಯವಾದ ನೈಸರ್ಗಿಕ ಸಂಪನ್ಮೂಲಗಳಾದ ಜಲ, ವಾಯು ಮುಂತಾದವುಗಳನ್ನು ನಾವು ಮಿತಿ ಮೀರಿ ಬಳಸಿದ್ದೇವೆ. ಹೇಗೆಂದರೆ ಈ 2020 ವರ್ಷದಲ್ಲಿ ನಾವು ಬಳಸಬೇಕಿದ್ದ ಸಂಪನ್ಮೂಲಗಳನ್ನು ಇದೇ ಜುಲೈ ತಿಂಗಳಿನಲ್ಲೇ ಮುಗಿಸುವುದಿತ್ತು. ಆದರೆ ಕೊರೋನಾ (COVID-19) ಎಂಬ ಸಾಂಕ್ರಾಮಿಕ ರೋಗದ ಪರಿಣಾಮ ಹಲವಾರು ಕೆಲಸಗಳು, ಮಾನವನ ಚಟುವಟಿಕೆಗಳು ಸ್ಥಗಿತಗೊಂಡು, ಅದು ಮೂರು ವಾರ ಮುಂದೂಡಲ್ಪಟ್ಟಿದೆ. ಅಂದರೆ ಈ 2020 ರ ಮಿತಿಮೀರಿದ ಬಳಕೆ ದಿನವು ಆಗಸ್ಟ್ 22 ಕ್ಕೆ ಮುಂದೂಡಿದೆ. ಇದರ ನೆನಪಿಗೆ ಮತ್ತು ಮುಂದೆ ನಮ್ಮ ಜೀವನದ ದುಃಸ್ಥಿತಿ ನೆನೆದು ಎಚ್ಚರಿಕೆಯಿಂದ  ಮಿತಿ ಮೀರಿದ ಬಳಕೆ ದಿನ(Earth over shoot day ) ಆಚರಣೆ ಮಾಡುತ್ತಿದ್ದೇವೆ.

1970 ರಿಂದ ನಾವು ಇಂತಹ ಮಿತಿಮೀರಿದ ಸಂಪನ್ಮೂಲಗಳ ಬಳಕೆಯನ್ನು ಅಳತೆ ಮಾಡಲಾರಂಭಿಸಿದೆವು. ಇದನ್ನು ಅಳತೆ ಮಾಡಲು ಒಂದು ಸೂತ್ರವನ್ನು ಉಪಯೋಗಿಸಲಾಗುತ್ತಿದೆ. ಆ ಸೂತ್ರ ಯಾವುದೆಂದರೆ ಆ ವರ್ಷದಲ್ಲಿ ಮರುಕಳಿಸಿದ ನೈಸರ್ಗಿಕ ಸಂಪನ್ಮೂಲಗಳನ್ನು ಅದೇ ವರ್ಷ ಮಾನವನು ಬಳಸಿದ ನೈಸರ್ಗಿಕ ಸಂಪನ್ಮೂಲಗಳಿಂದ ಭಾಗಿಸಿ, 365 ರಿಂದ ಗುಣಿಸುವುದಾಗಿದೆ. 1970 ರ ವರ್ಷ ಒಂದು ದಿನ ಮೊದಲೇ ನಾವು ನಮ್ಮ ಸಂಪನ್ಮೂಲಗಳನ್ನು ಬಳಕೆ ಮಾಡಿದರೆ 1976 ರಲ್ಲಿ ನವಂಬರ್ ನಲ್ಲಿ ನಮ್ಮ ವರ್ಷದ ಸಂಪನ್ಮೂಲಗಳನ್ನು ಬರಿದು ಮಾಡಿದೆವು. 1990 ರಲ್ಲಿ ಸೆಪ್ಟೆಂಬರ್ ಮೂವತ್ತಕ್ಕೆ ನಮ್ಮ ಸಂಪನ್ಮೂಲಗಳನ್ನು ದೋಚಿದೆವು, 2018 ರಲ್ಲಿ ಆಗಸ್ಟ್ ಮೂರಕ್ಕೆ ನಮ್ಮ ಸಂಪನ್ಮೂಲಗಳನ್ನು ಮುಗಿಸಿದೆವು. ಈ ವರ್ಷ ಕೊರೋನೊ ಕಾರಣ ಆಗಸ್ಟ್ 22 ಕ್ಕೆ ಮಿತಿ ಮೀರಿದ ಬಳಕೆ ದಿನ ಆಚರಣೆ ಮಾಡುವ ದುಃಸ್ಥಿತಿ ಬಂದೊದಗಿದೆ.

ನಾವು ಹೀಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಮಿತಿ ಮೀರಿ ಬಳಕೆ ಮಾಡಿದರೆ ಮುಂದಿನ ವರ್ಷಗಳಲ್ಲಿ ಎರಡು ಮೂರು ತಿಂಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಮುಗಿಸಿ ಮುಂದಿನ ಪೀಳಿಗೆಯ ಸಂಪನ್ಮೂಲಗಳನ್ನು ಬರಿದು ಮಾಡುವ ಬಕಾಸುರರಾಗುವುದರಲ್ಲಿ ಸಂದೇಹವಿಲ್ಲ.

ಈಗಲೂ ಕಾಲ ಮಿಂಚಿಲ್ಲ. ನಮ್ಮಂತೆ ಇತರೆ ಪ್ರಾಣಿ ಪಕ್ಷಿ ಗಳಿಗೂ ಜೀವಿಸಲು ಅವಕಾಶ ನೀಡಬೇಕು. ಬದುಕಿ, ಬದುಕಲು ಬಿಡು ಎಂಬ ನಿಯಮ ಪಾಲಿಸಬೇಕು.  ನಾವು ವಿವೇಚನೆಯಿಂದ ನಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಕೆ ಮಾಡಿ ಸುಸ್ಥಿರ ಅಭಿವೃದ್ಧಿ ಮಾಡುವ ಅಗತ್ಯವಿದೆ. ಇಲ್ಲವಾದರೆ ನಮ್ಮ ಭಯಾನಕ  ಅಂತ್ಯಕ್ಕೆ  ನಾವೇ ಮುನ್ನುಡಿ ಬರೆದಂತಾಗುತ್ತದೆ.  ಯೋಚಿಸಿ, ಯೋಜಿಸಿ  ಜೀವಿಸೋಣ.  ಮಹಾತ್ಮ ಗಾಂಧೀಜಿಯವರು ಹೇಳಿದಂತೆ “ಪ್ರಕೃತಿ ಇರುವುದು ನಮ್ಮ ಆಸೆ ಈಡೇರಿಸಲು ಮಾತ್ರ, ಆದರೆ ದುರಾಸೆಯನ್ನಲ್ಲ” ಎಂಬುದನ್ನು ಪದೇ ಪದೇ ನೆನಪಿಸಿಕೊಂಡು ಪ್ರತೀ ಜೀವಿಗಳ ಜೊತೆ ಸಹಬಾಳ್ವೆಯಿಂದ ಜೀವಿಸುವುದನ್ನು ಕಲಿಯೋಣ.

ಲೇಖನ: ಸಿ.ಜಿ.ವೆಂಕಟೇಶ್ವರ
ತುಮಕೂರು ಜಿಲ್ಲೆ

Print Friendly, PDF & Email
Spread the love
error: Content is protected.