ಅಲೆಮಾರಿಯ ಅನುಭವಗಳು – ೧೨

ಅಲೆಮಾರಿಯ ಅನುಭವಗಳು – ೧೨

© ಪವನ್ ಕುಮಾರ್ ಟಿ. ಎನ್.

ಒಂದೊಂದು ದಾರಿ ಒಂದೊಂದು ಅನುಭವವನ್ನು ಎದೆಗಿಳಿಸುತ್ತದೆ.! ದಟ್ಟ ಕಾಡು – ಸ್ವಚ್ಛ ಹಸಿರು – ಹಾರುವ ಹದ್ದು – ಕೂಗುವ ಕೋಗಿಲೆ – ಮಳೆ ನಿಂತ ಮಧ್ಯಾಹ್ನ – ಆಗೊಮ್ಮೆ ಈಗೊಮ್ಮೆ ಇಣುಕುವ ನೇಸರ – ಒಣಗಿದೆಲೆಯುದುರಿ ಬಿದ್ದ ತಿರುವು ತುಂಬಿದ ರಸ್ತೆ – ಎಲೆಯ ತುದಿಗೆ ತೊಟ್ಟಿಕ್ಕುವ ಹನಿ – ಮಳೆಗಾಲದಲ್ಲಿ ಹಾಲ್ನೊರೆಯಾಗಿ ಧುಮ್ಮಿಕ್ಕುವ ಜಲಪಾತಗಳನ್ನು ನೋಡುತ್ತ ನಿಂತರೆ ಮೈಮರೆತುಬಿಡುತ್ತೇವೆ. ಅಂತಹ ಸುಂದರ ಜಲಪಾತಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಸಮೀಪವಿರುವ ಮಾಗೋಡು ಜಲಪಾತವೂ ಒಂದು.

ಮಾಗೋಡು ಜಲಪಾತ ಹಸಿರು ವನಸಿರಿಯ ಮಧ್ಯೆ ಹರಿದು ಧುಮ್ಮಿಕ್ಕುವ ಬೇಡ್ತಿ ನದಿಯ ಜಲಧಾರೆ ಸುಂದರ ದೃಶ್ಯಕಾವ್ಯವೇ ಹೌದು. ಹುಬ್ಬಳ್ಳಿಯ ಉಣಕಲ್‌ನಿಂದ ಜನ್ಮಪಡೆದು ಕಲಘಟಗಿ, ಮುಂಡಗೋಡ, ಯಲ್ಲಾಪುರ ತಾಲೂಕಿನಲ್ಲಿ ಹರಿದು ಬರುವ ಬೇಡ್ತಿನದಿಯು ಮುಂದೆ ಮಾಗೋಡು ಜಲಪಾತವಾಗಿ ಭೋರ್ಗರೆಯುತ್ತದೆ. ಎರಡು ಹಸಿರು ವನಸಿರಿಯ ಮಧ್ಯೆ ರಭಸದಿಂದ ನುಗ್ಗುವ ಜಲಧಾರೆ ಮೂರು ಸ್ಥರಗಳಲ್ಲಿ ಎತ್ತರದಿಂದ ಕಣಿವೆ ಸೇರುತ್ತದೆ. ಸೌಮ್ಯ, ರಮ್ಯ ಮತ್ತು ಭವ್ಯ ಎಂಬ ಹೆಸರಿನಿಂದ ಕರೆಯುವ ಧಾರೆಗಳು ತಮ್ಮ ಸೊಬಗಿನಿಂದ ನಿಜಕ್ಕೂ ಹೆಸರಿಗೆ ಅನ್ವರ್ಥಕವೆನಿಸುತ್ತವೆ. ಹಚ್ಚ ಹಸಿರು ವನಸಿರಿಯ ಹೊದಿಕೆ ಹೊದ್ದುಕೊಂಡಿರುವ ಬೆಟ್ಟಗಳ ಸಂದಿನಲ್ಲಿ ಶಾಂತವಾಗಿ ಹರಿಯುವ ಮೊದಲ ಹಂತವನ್ನು ‘ಸೌಮ್ಯ’ವೆಂದು ನಂತರ ಬಂಡೆಗಳ ನಡುವೆ ಬೆಳ್ನೊರೆಯಾಗಿ ಧುಮ್ಮಿಕ್ಕುವ ರಮಣೀಯ ದೃಶ್ಯವನ್ನು ‘ರಮ್ಯ’ವೆಂದು ಬಳಿಕ ಭೋರ್ಗರೆಯುತ್ತ ಸಾಗುವುದನ್ನು ‘ಭವ್ಯ’ವೆಂದೂ ವರ್ಣಿಸಲಾಗಿದೆ.

© ಅರವಿಂದ ರಂಗನಾಥ

ಎತ್ತರದಿಂದ ಧುಮ್ಮಿಕ್ಕುವ ಜಲಪಾತದ ಸೌಂದರ್ಯವನ್ನು ಎದುರಿನ ಬೆಟ್ಟದ ಮೇಲೆ ನಿಂತು ನೋಡುವುದೇ ಸೊಬಗು. ಸೂರ್ಯನ ಕಿರಣಗಳು ಜಲಧಾರೆಯ ಮೇಲೆ ಬಿದ್ದಾಗ ಉಂಟಾಗುವ ಸೃಷ್ಟಿಯ ಅದ್ಭುತ ಲೀಲೆಯನ್ನು ಕಣ್ಣಾರೆ ನೋಡಿಯೇ ಸಂಭ್ರಮಿಸಬೇಕು. ಶುಭ್ರವಾಗಿ ಕಂಗೊಳಿಸುತ್ತಾ ನೀರಿನ ಹನಿಗಳಿಂದ ಕೂಡಿ ಹೊಗೆಯಂತೆ ಮೇಲೇಳುವ ನೋಟ ನಯನ ಮನೋಹರ. ಜಲಪಾತವನ್ನು ವೀಕ್ಷಿಸಲು ಅನುಕೂಲಕ್ಕೆಂದು ನಾನಾ ದಿಕ್ಕುಗಳಲ್ಲಿ ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಹತ್ತಿ ಇಳಿಯಲು ವ್ಯವಸ್ಥಿತವಾದ ಮೆಟ್ಟಿಲುಗಳಿವೆ. ಪ್ರವಾಸಿ ತಾಣವನ್ನು ಅರಣ್ಯ ಇಲಾಖೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಸುಂದರ ತೋಟ ಹಾಗೂ ನೀರಿನ ವ್ಯವಸ್ಥೆ ಇದೆ. ವಿರಮಿಸಲು ಅಲ್ಲಲ್ಲಿ ನಿಲುವು ತಾಣಗಳನ್ನು ನಿರ್ಮಿಸಲಾಗಿದೆ. ಮಳೆಗಾಲದುದ್ದಕ್ಕೂ ಹಸಿರು ಕಾವ್ಯ ಮೈದಳೆಯುತ್ತದೆ.

ಇದೆ ಬೆಟ್ಟದ ಮೇಲೆ ನಿಂತು ಬೆನ್ನ ದಿಕ್ಕಿಗೆ ಕತ್ತು ತಿರುಗಿಸಿದರೆ ಗಣಪತಿ ಜಲಪಾತ. ಸಹಸ್ರ ಲಿಂಗಗಳ ಮೈ ತೊಳೆದು ಮುಟ್ಟಿದ ಹನಿ ಹನಿಯೂ ಸಹಸ್ರ ವನ್ಯ ರಾಶಿಯ ಬೇರುಗಳ ತುದಿ ಮುಟ್ಟಿ ಸೃಷ್ಟಿಯಾದ ನಯನಮನೋಹರ ಜಲಧಾರೆ!

© ಅರವಿಂದ ರಂಗನಾಥ

ಮಾಗೋಡು ಜಲಪಾತದ ಅಡಿಗಿಳಿಯುವ ಕಡಿದಾದ ಸುಮಾರು 200-250 ಮೀಟರ್ ಎತ್ತರದಿಂದಾದ ಈ ಪ್ರಪಾತವನ್ನು ಕೇವಲ ನದಿ ಪಾತ್ರದಿಂದ ಇಳಿಯಬಹುದು ಇಲ್ಲವೆಂದರೆ ಕೆಳಗಿನಿಂದ ಮೇಲೆ ಹತ್ತುತ್ತಾ ನದಿ ಜಲಪಾತವಾಗಿ ಧುಮ್ಮಿಕ್ಕಿ, ಕಡಿದಾದ ಕಣಿವೆಯಲ್ಲಿ ಬಸವಳಿದು ಹೋಗುವ ಪಾತ್ರದಿಂದ ತಲುಪಬಹುದು. ದೂರ ನಿಂತು ನೋಡಿದರೆ ಸಾಕೆನ್ನುವವರು ನಾನು ಮೇಲೆ ಹೇಳಿದ ಹಾದಿಯಲ್ಲಿ ಹೋದರೆ ಅರಣ್ಯ ಇಲಾಖೆ ಮಾಡಿರುವ ಎದುರು ಗುಡ್ಡದ ಪ್ರವಾಸಿ ತಾಣದಿಂದ ನೋಡಬಹುದು. ಆದರೆ ಈ ಭಾಗದಿಂದ ಪ್ರಪಾತಕ್ಕೆ ಇಳಿಯಲು ಅಸಾಧ್ಯ. ಆದರೆ ರಮಣೀಯ ನಯನ ಮನೋಹರ ಜಲಪಾತವನ್ನು ವೀಕ್ಷಿಸಬಹುದು. ನಿರ್ಜನ ಕಾಡಲ್ಲಿ ಭಯ ಹುಟ್ಟುತ್ತೆ. ಆದರೆ ಜಲಪಾತ ತಲುಪಿದಾಗ ಭಯ ಮರೆಯಾಗಿ ಪ್ರೀತಿ ಮೆರೆಯುತ್ತೆ.

ಹುಬ್ಬಳ್ಳಿಯಿಂದ ಯಲ್ಲಾಪುರ ಕೇವಲ 70 ಕಿಲೋ ಮೀಟರ್. ಅಲ್ಲಿಂದ ಜಲಪಾತ 18 ಕಿಲೋ ಮೀಟರ್ ದೂರದಲ್ಲಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಅಂಕೋಲಾಕ್ಕೆ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಹೋಗುವಾಗ, ಯಲ್ಲಾಪುರ ಬಿಟ್ಟು 3 ಕಿಲೋ ಮೀಟರ್ ಕ್ರಮಿಸಿದ ನಂತರ ಎಡಬದಿಗೊಂದು ಮಾಗೋಡಿಗೆ ಹೊರಳುವ ರಸ್ತೆ ಬರುತ್ತದೆ. ಅಲ್ಲಿ ಮಾಗೋಡು ಜಲಪಾತದ ದಾರಿ ಎಂಬ ಫಲಕವು ಕಾಣುತ್ತೆ. ಸಣ್ಣ ಕಿರಿದಾದ ಟಾರ್ ಮಾಡಿದ ಒಳ್ಳೆಯದೆನ್ನಲಾಗದ ರಸ್ತೆ. ದಾರಿಯುದ್ದಕ್ಕೂ ಹಸಿರಿನ ಬೆಡಗು. 15 ಕಿಲೋ ಮೀಟರ್ ಸಾಗಿದ ನಂತರ ಆ ಹಸಿರಿನ ಮಡಿಲೊಳು ಸುತ್ತ ಬೆಟ್ಟದ ನಡುವೆ ಒಂದು ಪ್ರಪಾತ ಹಾಗೂ ಒಂದು ಮೂಲೆಯಲ್ಲಿ ಕಡಿದಾದ ಕಣಿವೆ. ಈ ಪ್ರಪಾತದಲ್ಲಿ ಎರಡು ಭಾಗಗಳಲ್ಲಿ ಬೇಡ್ತಿ ನದಿ ಧುಮ್ಮಿಕ್ಕುವ ನೈಸರ್ಗಿಕ ಸೋಜಿಗವೆ ಮಾಗೋಡು ಜಲಪಾತ.! ಸುಮಾರು 650 ಅಡಿ ಎತ್ತರದಿಂದ ಹಚ್ಚಹಸುರಿನ ದಟ್ಟ ಬೆಟ್ಟಗಳೆರಡರ ಮಧ್ಯದಿಂದ ಧುಮ್ಮಿಕ್ಕುವ ದೃಶ್ಯವೈಭವ ವರ್ಣನಾತೀತ. ಇದು ಮುಂದೆ ಗಂಗಾವಳಿ ನದಿಯಾಗಿ ಕಾಡಿನ ಮಧ್ಯೆ ಹರಿದು ಅಂಕೋಲ ಮಾರ್ಗವಾಗಿ ಅರಬ್ಬಿ ಸಮುದ್ರ ಸೇರುತ್ತದೆ.

ಲೇಖನ: ಮೌನೇಶ ಕನಸುಗಾರ
             ಕಲ್ಬುರ್ಗಿ ಜಿಲ್ಲೆ
.

Print Friendly, PDF & Email
Spread the love
error: Content is protected.