ನೀವೂ ಕಾನನಕ್ಕೆ ಬರೆಯಬಹುದು
ವಿಶ್ವ ಪರಿಸರ ಸಂರಕ್ಷಣಾ ದಿನ ಜುಲೈ 28
ನಮ್ಮ ಪ್ರಕೃತಿ ಎಷ್ಟು ಚೆಂದ, ಇದರ ಸೌಂದರ್ಯ ಅನೇಕ ಕವಿಗಳಿಗೆ ಸ್ಪೂರ್ತಿ, ಹೀಗೆ ಸ್ಪೂರ್ತಿಗೊಂಡ ಕವಿಯೊಬ್ಬರು…
ಯಾವ ಶಿಲ್ಪಿ ಕೆತ್ತಿದನೋ ಈ ಸುಂದರ ಲೋಕಾನ
ಈ ಲೋಕದಾಗೆ ಬಣ್ಣಬಣ್ಣದ ಹೂಗಳ ಇಟ್ಟಾನ
ಕಲ ಕಲ ಕಲ ಕಲ ಹರಿಯುವಂತ ನದಿಯನ್ನು ಇಟ್ಟಾನ
ಆ ನದಿಯ ದಡದಲ್ಲಿ ಆಡೋಕಂತ ನವಿಲನ್ನು ಬಿಟ್ಟಾನ.
ಎಂದು ಪ್ರಕೃತಿಯ ಬಗ್ಗೆ ವರ್ಣಿಸಿದ್ದಾರೆ. ಎಲ್ಲಾ ಜೀವರಾಶಿಗಳೂ ಒಂದಲ್ಲ ಒಂದು ರೀತಿ, ಒಂದರೊಂದಿಗೆ ಒಂದು ಅವಲಂಬಿತವಾಗಿ ಪರಿಸರ ವ್ಯವಸ್ಥೆಯಾಗಿದೆ. ಈ ಪರಿಸರ ವ್ಯವಸ್ಥೆಯಲ್ಲಿ ಯಾವ ಜೀವಿಯನ್ನು ಚಿಕ್ಕದು ಎಂದು ನಿರ್ಲಕ್ಷಿಸಲಾಗುವುದಿಲ್ಲ ಅಥವಾ ದೊಡ್ಡದು ಎಂದು ಅಟ್ಟಕೇರಿಸುವ ಹಾಗಿಲ್ಲ. ಏಕೆಂದರೆ ಪ್ರತಿಯೊಂದು ಜೀವಿಯೂ ತನ್ನದೇ ಆದ ರೀತಿಯಲ್ಲಿ ಪರಿಸರಕ್ಕೆ ಕೊಡುಗೆ ನೀಡುತ್ತದೆ.
ಇತ್ತೀಚಿಗೆ ಹೆಚ್ಚುತ್ತಿರುವ ಮಾನವ ಚಟುವಟಿಕೆಯಿಂದ ಪರಿಸರ ನಾನಾ ರೀತಿಯಲ್ಲಿ ಮಲಿನಗೊಳ್ಳುತ್ತಿದೆ. ಹಾಗೆಯೇ ಅನೇಕ ಜೀವಿಗಳ ನಾಶಕ್ಕೆ ಕಾರಣವಾಗುತ್ತಿದೆ. ರಸ್ತೆ, ಕಾರ್ಖಾನೆ, ಕಟ್ಟಡಗಳ ನಿರ್ಮಾಣಗಳಿಗಾಗಿ ಮರಗಳ ಮಾರಣ ಹೋಮ ನಡೆಯುತ್ತಿದೆ. ವಾಹನ-ಕಾರ್ಖಾನೆಗಳಿಂದ ಹೊರಸೂಸುವ ಹೊಗೆ, ಗಾಳಿಯಲ್ಲಿ ಬೆರೆತು ವಾಯು ಮಾಲಿನ್ಯವಾಗುತ್ತಿದೆ. ಸಮುದ್ರದಲ್ಲಿ ತೈಲ ಸೋರಿಕೆ, ಕಾರ್ಖಾನೆಗಳ ತ್ಯಾಜ್ಯ ಮಿಶ್ರಣವಾಗಿ ಅನೇಕ ಜಲಚರಗಳು ಸಾವನ್ನಪ್ಪುತ್ತಿವೆ. ಕಟ್ಟಡಗಳು, ಸ್ಥಾವರಗಳು, ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದು ಪಕ್ಷಿಗಳು ಪ್ರಾಣ ಬಿಡುತ್ತಿವೆ. ಇವೆಲ್ಲವನ್ನು ಗಮನಿಸಿ, ಪ್ರಕೃತಿಯಲ್ಲಿನ ಸಮತೋಲನ ಹಾಗೆಯೇ ಕಾಪಾಡಲು ಪ್ರತಿಯೊಂದು ಜೀವಿಯು ಮುಖ್ಯ ಎಂಬುದನ್ನು ಅರಿತು ನಮ್ಮ ಕರ್ತವ್ಯಗಳ ನೆನೆದು ಬದುಕೋಣ. ಇತರ ಜೀವಿಗಳನ್ನು ಬದುಕಲು ಬಿಡೋಣ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಅರಿವು ಮಾಡಿಸಲು ಜುಲೈ 28ರಂದು ವಿಶ್ವ ವಿಶ್ವ ಪರಿಸರ ಸಂರಕ್ಷಣಾ ದಿನವಾಗಿ ಆಚರಿಸಲಾಗುತ್ತದೆ.
ಹಾಗಾಗಿ ನೀವು ಬರೆದ ಪರಿಸರ ಲೇಖನಗಳು ಹಾಗೂ ಕವನಗಳನ್ನ ನಮ್ಮ ಈ ಇ-ಮಾಸಿಕಕ್ಕೆ ಜುಲೈ 15ರ ಒಳಗಾಗಿ ಈ ಕೆಳಗಿನ ವಿಳಾಸಕ್ಕೆ ಅಥವಾ ನಮ್ಮ ಇ ಮೇಲ್ ವಿಳಾಸಕ್ಕೆ ಕಳುಹಿಸಿಕೊಡಿ.
ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: kaanana.mag@gmail.com
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.