ಕಾನನ

ನಿಸರ್ಗದೆಡೆಗೆ ಪಯಣ

ಮಂಜು ಕವಿದರೂ ಸರಿ
ಮಬ್ಬಾದರೂ ಸರಿ
ಮಲ್ಲಿಗೆಯ ಕಂಪಿಗೆ
ಮಜ ನೀನೆ ಮುಗಿಲು

ಮನ ಮಂದವಾಗಲು
ಮರವೆಯಾಗಲು
ಮಳೆಯಾಗಲು
ಮುಗಿಲೇ ನೀನೆ ಸರಿ

ಮುಂಗಾರು
ಮುಂಬೆಳಕು
ಮುಂಜಾವು
ಮುಸ್ಸಂಜೆ

ಮುದವೆಲ್ಲಿ
ಮಿತವೆಲ್ಲಿ… ಮತ್ತೆ ಮತ್ತೆ
ಮುಗಿಲೇ ನಿನ್ನ
ಮುನ್ನ ಕಾಣುವಲ್ಲಿ

ಮುನಿಗಳಂದು
ಮುಗಿದರು
ಮುಗಿ ಬೀಳುವ
ಮಜಲಲಿ

ಮುಗಿಲೆ… ನಿನ್ನ
ಮುಡಿಯೇ
ಮುಖಜ ಭೂಮಿ
ಮುಂಗಾರು ಇರುತಿರೆ.

ಮುಗ್ಧ ಭಾವ
ಮರುಗುತಿದೆ
ಮೋಡ

ಮುಟ್ಟಾಟವಾಡಲು
ಮುಗಿಲೆತ್ತರದ
ಮರಗಳಿಲ್ಲ
ಮುನಿಸಾದೆಯಾ..

ಮನುಜನಾಸೆ
ಮತಿಯ ಕೆಡಿಸಿ
ಮರವ ಕಡಿಸಿದ
ಮುಗಿಲ ಶಪಿಸುವ..

ಮರುಳು ನಾವು
ಮೋಜ ನಂಬಿ
ಮಂಕು ಹಿಡಿದೆವು
ಮಣ್ಣ ತಿಂದೆವು..

ಮುಗಿಲ ಕಾಸ
ಮನ್ನ ಮಾಡಿ
ಮೋಡ ಜಪ್ತಿ
ಮಾಡಿದೆ..

ಮಳೆಯು ಇರದೇ
ಮನುಜ ನಗದೇ
ಮನ್ವಂತರ
ಮುಳುಗಿದೆ..

ಮರವ ಬೆಳಸಿ
ಮನವ ಉಳಿಸಿ
ಮಾತ ಕಾಯಬೇಕಿದೆ
ಮುಗಿಲ ಬೇಡಬೇಕಿದೆ..

ಮುನಿಸು ಸಲ್ಲ
ಮುಖವು ಬೆಲ್ಲ
ಮುಗಿಲ ಹನಿ
ಮಣಿದರೆ..

ಮುಗಿಲ ನಗಿಸಬೇಕಿದೆ..
ಮುಗಿಲ ಹಿಡಿಯಬೇಕಿದೆ..

-ನಂದಕುಮಾರ್ ಹೊಳ್ಳ.
ಸಾಸ್ತಾನ, ಪಾಂಡೇಶ್ವರ.




ಕಾನನದ ದನಿ ಹರಡಿ
error: Content is protected.