ಕಾನನ

ನಿಸರ್ಗದೆಡೆಗೆ ಪಯಣ

ಬೆಂಕಿ-ಮಳೆ

ಸುಡುಸುಡು ಬೇಸಿಗೆಯ ಬಿಸಿಲ ಬಿಸಿಗೆ
ಹಸಿರಿದ್ದ ಹುಲ್ಲು, ಗಿಡ-ಮರ ಒಣಗಿ
ಬೋಳಾಗಿ ಕಾಣುತಿಹ ಕಾಡು.

ಯಾರದೋ ಹೊಟ್ಟೆಯ ಉರಿಗೆ
ಸೇದಿ ಬಿಸಾಡಿದ ಬೀಡಿಯ ತುಂಡಿಗೆ
ಕೊತಕೊತ ಕುದಿಯುವ ತಲೆಯೊಳಗಿನ ಕಿಡಿಗೆ
ಸುಟ್ಟು ಬರಿದಾಯಿತು ಕಾಡು

ಕಾಳ್ಗಿಚ್ಚಿಗೆ ಎಲೆ ಸುಟ್ಟ ಹಸಿಹಸಿ ವಾಸನೆ
ಏನಾದರೂ ಇದು ಒಳ್ಳೆಯ ಕೆಲಸವೇ?
ತಾಯ ಸೆರಗ ಸುಟ್ಟಂತೆ!

ಲೆಕ್ಕವಿಟ್ಟವರು ಯಾರು?
ಇಲ್ಲಿ ಸತ್ತ ಹುಳಹುಪ್ಪಟೆಗಳ ಜೀವದ ಬೆಲೆ.
ನೀರಿಲ್ಲದೆ ಸತ್ತವು ಆನೆ ಚಿಗರೆ ಕಾಟಿ
ಹಾರಲಾಗದೆ ಸೀದು ಸುಟ್ಟವು ಮರಗಿಡಬಳ್ಳಿ.

ಯಾವ ಜೀವಿಯ ಕರುಣೆಯ ಕರೆಗೋ,
ಬೇ ಆಫ್ ಬೆಂಗಾಲ್ ನಲ್ಲಿ ಡಿಪ್ರೆಷನ್ನೋ!
ನಾಡಿನಾದ್ಯಂತ ಅಕಾಲಿಕ ಸುರಿಮಳೆ.

ಹೃದಯ ತುಂಬಿ ಬಂತೆನಗೆ ಮಳೆಕಂಡು,
ಮಳೆಯಲ್ಲವಿದು
ಜೀವದ ಸೆಲೆ!
ಆ ಹೃದೈವದ ಆಶೀರ್ವಾದ.

ಶಂಕರಪ್ಪ ಕೆ. ಪಿ.
ಬೆಂಗಳೂರು
ಜಿಲ್ಲೆ

ಕಾನನದ ದನಿ ಹರಡಿ
error: Content is protected.