ಜೇಡಗಳ ಜಾಡಿನಲ್ಲಿ

© ಅನಿಲ್ ಕುಮಾರ್ ಎನ್ ಆರ್
ಬೆಳ್ಳಂಬೆಳಿಗ್ಗೆ ಮಂಜು ಕವಿದು ದೂರದ ಗಿಡಮರಗಳು ಕಾಣದೆ ಮಸುಕಾಗಿದ್ದವು. ಈ ಚುಮು-ಚುಮು ಚಳಿಯಲ್ಲಿ ಅಮ್ಮನ ಮಾತುಗಳ ಆರ್ಭಟಕ್ಕೆ ಮಲಗಿದ್ದವನು ಎದ್ದು ಸೀದಾ ಹಸು ಕಟ್ಟಿದ ಕೊಟ್ಟಿಗೆ ಕಡೆ ನಡೆದೆ. ಹಸುವಿನ ಹಾಲು ಕರೆದು ಅದನ್ನು ಕೊಟ್ಟಿಗೆಯಿಂದ ಹೊರಕ್ಕೆ ಕಟ್ಟಿಹಾಕಿ ರಾತ್ರಿಯಿಡೀ ಹಸು ಹಾಕಿದ್ದ ಸಗಣಿಯನ್ನು ಮನೆಯ ಹಿಂದೆಯಿದ್ದ ತಿಪ್ಪೆಗೆ ಸೇರಿಸಿದೆ. ಅಷ್ಟರಲ್ಲಾಗಲೇ ನನ್ನ ಮೂರು ವರ್ಷದ ಮಗಳು ವನ್ಯ ತಾನು ಮಲಗಿದ್ದ ಮಂಚದ ಮೇಲಿಂದ ಇಳಿದು ಅಲ್ಲಿಯೇ ಮೆಟ್ಟಿಲ ಹತ್ತಿರ ಹೋಗಿ ತಲೆ ಮೇಲೆತ್ತಿ ತದೇಕಚಿತ್ತದಿಂದ ಸುಮ್ಮನೆ ನೋಡುತ್ತಾ ನಿಂತಿದ್ದಳು. ಅದೇ ಸಮಯಕ್ಕೆ ನಾನು ಗೇಟ್ ತೆಗೆದು ಒಳಗೆ ಪ್ರವೇಶಿಸಿದೆ. “ಮಂಜಪ್ಪ ಅಲ್ಲಿ ನೋಡು ಚಿಗ್ನೇಚರ್ ಪೈಡರ್ ಎಷ್ಟು ಚೆನ್ನಾಗಿದೆ. ರಾತ್ರಿಯಿಂದ ಅದು ಇಲ್ಲೇ ಇದೆ, ಪಾಪ ಅದರ ಮನೆಗೆ ಹೋಗೆ ಇಲ್ಲ” ಎನ್ನುತ್ತಾ ಮೆಟ್ಟಿಲನ ಎರಡು ಗೋಡೆಗಳನ್ನು ಆಧಾರವಾಗಿಸಿಕೊಂಡು ಬಲೆಯನ್ನು ನೇಯ್ಗೆ ಮಾಡಿ ಮಧ್ಯದಲ್ಲಿ ಧ್ಯಾನಸ್ಥರಂತೆ ತನ್ನ ಆಹಾರಕ್ಕಾಗಿ ಬಲಿಯನ್ನು ಕಾಯುತ್ತಿದ್ದ ಜೇಡವನ್ನು ತನ್ನ ಬಲಗೈ ತೋರು ಬೆರಳಿನಿಂದ ತೋರಿಸಿದಳು. ಹಿಂದಿನ ದಿನದ ರಾತ್ರಿ “ವನ್ಯ ಬಾ ಚಂದಿರ ಬಂದಿದ್ದಾನೆ ನೋಡೋಣ” ಅಂತಾ ಮೆಟ್ಟಿಲನ್ನು ಏರಿ ಮನೆ ಮೇಲಕ್ಕೆ ತೆರಳುತ್ತಿದ್ದಾಗ ಜೇಡರ ಬಲೆಯನ್ನು ಅವಳಿಗೆ ತೋರಿಸಿ “ವನ್ಯ ನೋಡಿಲ್ಲಿ ಜೇಡ ಬಲೆ ಕಟ್ಟಿದೆ. ಮಧ್ಯದಲ್ಲಿ ಕುಳಿತಿರುವುದು ಸಿಗ್ನೇಚರ್ ಸ್ಪೈಡರ್. ಎಷ್ಟು ಚಂದ ಇದೆ ಅಲ್ವಾ?!… ಎಂದು ಅವಳಿಗೆ ಕುತೂಹಲವನ್ನು ಹೆಚ್ಚಿಸುವಂತೆ ಹೇಳಿದ್ದೆ. ಆಗ ಅವಳು ಅದನ್ನು ಮುಟ್ಟಲು ಮುಂದಾದಳು. ಅವಳ ಚಲನೆ ಗಮನಿಸಿದ ನಾನು “ಏ ಮಗಳೇ, ಅದನ್ನು ಮುಟ್ಟಬಾರದು ಅದು ಕಚ್ಚಿಬಿಡುತ್ತದೆ. ಹಿಂದೆ ಬಾ ಅದರ ಹತ್ತಿರ ಹೋಗಬೇಡ” ಎಂದು ಎಚ್ಚರಿಸಿದ್ದೆ. ಆಯ್ತು ಅಪ್ಪ ಮುಟ್ಟಲ್ಲವೆಂದು ಹಿಂದೆ ಸರಿದು ಅದನ್ನು ತುಂಬಾ ಕುತೂಹಲದಿಂದ ವೀಕ್ಷಿಸಿದ್ದಳು. ಇಷ್ಟೆಲ್ಲಾ ನಡೆಯುವುದರೊಳಗೆ ನಾವು ಮನೆ ಮೇಲೆ ಬಂದ ಉದ್ದೇಶವನ್ನೇ ಮರೆತುಬಿಟ್ಟಿದ್ದೆವು. ಆದರೂ ನಾನು ಅವಳಿಗೆ ಹಾಲಿನಂತೆ ಬೆಳಕು ಚೆಲ್ಲುತ್ತಿದ್ದ ಚಂದ್ರನನ್ನು ತೋರಿಸಿಕೊಂಡು ಕೆಳಗಿಳಿದು ರೂಮಿಗೆ ಬಂದು ಮಲಗುವುದರೊಳಗೆ ಗಂಟೆ ಹತ್ತಾಗಿತ್ತು. ರಾತ್ರಿಯಲ್ಲಿ ಇವಳಿಗೆ ಸಿಗ್ನೇಚರ್ ಸ್ಪೈಡರ್ ದೇ ಕನಸು ಬಿದ್ದಿರಬೇಕೇನೋ? ಅದಕ್ಕೆ ಹಾಸಿಗೆಯಿಂದ ಎದ್ದವಳೇ ಸೀದಾ ಜೇಡರ ಬಲೆಯನ್ನು ಹರಿಸಿ ಬಂದು ತೋರಿಸಿದ್ದಿರಬೇಕು.

ಕೆಲವು ವರ್ಷಗಳ ಹಿಂದೆ ಸ್ನೇಹಿತರಾದ ಶಿಡ್ಲಘಟ್ಟದ ಅನಂತಲಕ್ಷ್ಮೀ ರವರು ಫೋನ್ ಮಾಡಿ “ಸರ್, ನಿಮ್ಮ ಮೊಬೈಲ್ಗೆ ಒಂದು ಫೋಟೋ ಕಳಿಸಿದ್ದೇನೆ ನೋಡಿ. ನಮ್ಮ ಮನೆಯ ಪಕ್ಕದ ಕೈತೋಟದಲ್ಲಿನ ದಾಳಿಂಬೆ ಗಿಡದಲ್ಲಿ ಒಂದು ಬಲೆ ಹೆಣೆದು ಚಲನೆ ಮಾಡದೆ ಸುಮ್ಮನೆ ಕುಳಿತಿದೆ. ಇದು ಯಾವ ಜೀವಿಯಿದು?” ಎಂದು ಕೇಳಿದ್ದರು. ನಾನು ವಾಟ್ಸಪ್ ತೆರೆದು ನೋಡಿ ಕರೆಯಲ್ಲಿಯೇ ಇದ್ದ ಅವರಿಗೆ “ಮೇಡಂ ಇದು ಸಿಗ್ನೇಚರ್ ಸ್ಪೈಡರ್, ಅದೇನು ಮಾಡಲ್ಲ ನಿಮ್ಮ ಗಿಡಗಳಿಗೆ ಬರುವ ಕೀಟಗಳನ್ನು ನಿಯಂತ್ರಣ ಮಾಡುತ್ತದೆ. ಕೀಟಗಳನ್ನು ಹಿಡಿಯಲು ಬಲೆ ಹೆಣೆದು, ಬೇಟೆಗಾಗಿ ಕಾಯುತ್ತಾ ಕುಳಿತಿರಬೇಕು. ಅದಕ್ಕೆ ಏನು ತೊಂದರೆ ಮಾಡಬೇಡಿ” ಎಂದು ಹೇಳಿ ಮೊಬೈಲ್ನ ಕೆಂಪು ಬಟನ್ ಒತ್ತಿ ಜೇಬಿಗಿಳಿಸಿಕೊಂಡೆ.

ಮೊನ್ನೆ ನನ್ನ ಮಡದಿ ಯಶೋಧ, ಮಗಳು ವನ್ಯ, ಮಗನಾದ ನೇಸರ ಈ ಮೂವರು ನಮ್ಮ ತೋಟದ ಹಿಂದೆ ಇದ್ದ ಅವರ ದೊಡ್ಡಮ್ಮನ ಮನೆ ಹತ್ತಿರ ಹೋಗಿ ವಾಪಸ್ಸಾಗುತ್ತಿರುವಾಗ, ತೋಟದ ಬದುವಿನ ಪಕ್ಕದಲ್ಲಿ ಮುಳ್ಳು ತಂತಿಗಳಿಗೆ ಬಲೆಯನ್ನು ಹೆಣೆದು ಮಧ್ಯದಲ್ಲಿ ಕುಳಿತಿದ್ದ ಜೇಡವನ್ನು ಸೂಕ್ಷ್ಮವಾಗಿ ಗಮನಿಸಿದ ವನ್ಯ “ಅಮ್ಮ ಚಿಗ್ನೇಚರ್ ಪೈಡರ್” ಎಂದು ಹೇಳಿದ್ದಾಳೆ. ಆದರೆ ಯಶೋಧನಿಗೆ ಅದು ಅರ್ಥವಾಗದೆ ಸುಮ್ಮನೆ ಮುನ್ನಡೆದು ಬಂದಿದ್ದಾರೆ. ಅದೇ ಸಮಯಕ್ಕೆ ತೋಟದಲ್ಲಿ ನನ್ನನ್ನು ನೋಡಿದ ವನ್ಯ “ಅಪ್ಪ ಇಲ್ಲೊಂದು ಚಿಗ್ನೇಚರ್ ಪೈಡರ್ ನೋಡು ಬಾ” ಎಂದು ಕೂಗಿ ಹೇಳಿದಳು. ಆಗ ಇವಳಿಗೆ ಜೇಡಗಳ ಬಗ್ಗೆ ಎಷ್ಟು ಕುತೂಹಲ ಮತ್ತು ಸೂಕ್ಷ್ಮತೆಯಿದೆ ಎಂದು ಆಶ್ಚರ್ಯಪಟ್ಟುಕೊಳ್ಳುತ್ತಾ ಅಲ್ಲಿಗೆ ಹೋಗಿ ಯಶೋಧಳಿಗೆ ಜೇಡವನ್ನು ತೋರಿಸಿ ಉಪಯುಕ್ತವಾದ ಅಂಶಗಳನ್ನು ತಿಳಿಸಿದೆ. “ವನ್ಯ ಜಾಣೆ, ಸ್ಪೈಡರ್ ಗಳನ್ನು ಎಷ್ಟು ಬೇಗ ಹುಡುಕುತ್ತಾಳೆ” ಎಂಬ ಯಶೋಧನ ಮಾತಿಗೆ ಮಗಳು ನಗುತ್ತಾ ನುಲಿಯುತ್ತಾ ನಲಿದಾಡಿದಳು. ಈ ಸಿಗ್ನೇಚರ್ ಸ್ಪೈಡರ್ ಗಳು ತನ್ನ ನಾಲ್ಕು ಜೊತೆ ಕಾಲುಗಳನ್ನು ಹರಡಿಕೊಂಡು ಬಲೆಯ ಮಧ್ಯೆ ಶವಸ್ಥಿತಿಯಲ್ಲಿ ಇರುತ್ತವೆ. ಕಾಲಿನ ಪಕ್ಕದಲ್ಲಿ ಬಲೆಯ ಮೇಲೆ ಸಹಿ ಮಾಡಿದಂತೆ ಜಿಗ್ ಜಾಗ್ ರೀತಿ ಪದರಗಳು ಇರುವುದರಿಂದ ಈ ಹೆಸರು ಬಂದಿರಬೇಕೆಂದೆನಿಸುತ್ತದೆ. ನಾವು ಹತ್ತಿರ ಹೋದರೂ ಅಲುಗಾಡುವುದಿಲ್ಲ. ತನ್ನ ಬಲಿಯು ಬಲೆಗೆ ಬೀಳುವವರೆಗೂ ಅನೇಕ ದಿನಗಳ ಕಾಲ ಅದೇ ಸ್ಥಿತಿಯಲ್ಲಿರುತ್ತವೆ. ಕನ್ನಡದಲ್ಲಿ ಇದಕ್ಕೆ ದಸ್ಕತ್ ಜೇಡ ಎಂದೂ ಸಹ ಕರೆಯುತ್ತಾರೆ. ಇವುಗಳು ವೈಜ್ಞಾನಿಕವಾಗಿ ಆರ್ಗಿಯೋಪೇ (Argiope) ಜಾತಿಗೆ ಸೇರಿದವು. ಇವುಗಳು ಹೆಚ್ಚಾಗಿ ಅರಣ್ಯ ಪ್ರದೇಶ ಮತ್ತು ತೋಟಗಳಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿರುತ್ತವೆ. ಸಾಧ್ಯವಾದರೆ ನೀವೂ ಸಹ ನಿಮ್ಮ ಕೈ ತೋಟಗಳಲ್ಲಿ ಒಮ್ಮೆ ಗಮನಿಸಿ ನೋಡಿ.

ಹೀಗೆ ಕೆಲವು ದಿನಗಳ ತರುವಾಯ ಒಂದು ರಾತ್ರಿ ಎಂಟು ಗಂಟೆಯ ಸಮಯ ಇರಬಹುದು. ನಾನು ನಮ್ಮನೆ ಅಂಗಳದಲ್ಲಿ ಸುಮ್ಮನೆ ಕುಳಿತಿದ್ದೆ. ಎಲ್ಇಡಿ ಬಲ್ಪ್ ನ ಬೆಳಕು ನನ್ನ ಕಣ್ಣಿಗೆ ಪ್ರಕಾಶಮಾನವಾಗಿ ಬೀಳುತ್ತಿತ್ತು. ಬಲ್ಪಿನ ಹಿಂಬದಿಯಲ್ಲಿ ಒಂದು ಜೇಡ ಹಸು ಕಟ್ಟಿ ಹಾಕುವ ಗೂಟಗಳ ಮಧ್ಯೆ ತನ್ನ ಆಹಾರವಾದ ಕೀಟಗಳನ್ನು ಮಿಕ ಮಾಡಿಕೊಳ್ಳಲು ಬಲೆಯನ್ನು ನೇಯುತ್ತಿತ್ತು. ತನ್ನ ಕಾಲುಗಳಿಂದ ಮೊದಲು ಬಿಟ್ಟಿದ್ದ ನೂಲಿನ ಮೇಲೆ ಸರಸರನೇ ನಡೆದು ತನ್ನ ದೇಹದ ಹಿಂಬದಿಯಿಂದ ಬರುವ ನೂಲನ್ನು ಮೊದಲ ನೂಲಿಗೆ ತನ್ನ ಕಾಲುಗಳಿಂದ ಹೆಣೆದು ಮುನ್ನಡೆಯುತ್ತಿತ್ತು. ಕುತೂಹಲದಿಂದ ಬಲೆಯ ಸನಿಹದಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾ ಕೆಲ ನಿಮಿಷಗಳ ಕಾಲ ಸುಮ್ಮನೆ ನಿಂತು ನೋಡುತ್ತಿದ್ದೆ. ಅದೇ ಸಮಯಕ್ಕೆ ನಮ್ಮ ಅಮ್ಮ ಬಂದು “ಏನು ನೋಡುತ್ತಿದ್ದೀಯಾ?! ಅಲ್ಲಿ ನಿಂತ್ಕೊಂಡು. ಕತ್ತಲಲ್ಲಿ ಹುಳು-ಹುಪ್ಪಟೆ ಬರ್ತಾವೆ” ಎಂದು ಮೇಲು ದನಿಯಲ್ಲಿ ಕೇಳಿದರು. ಅವರಿಗೆ ನನ್ನ ಚಲನವಲನಗಳಿಂದ ಸಂಶಯವಿದ್ದಿರಬೇಕು. ಏಕೆಂದರೆ ಕೆಲವು ಬಾರಿ ನಮ್ಮ ಅಂಗಳಕ್ಕೆ ಬಂದ ಹಾವುಗಳನ್ನು ಮನೆಯವರಿಗೆ ಗೊತ್ತಿಲ್ಲದಂತೆ ಅವುಗಳನ್ನು ಅಲ್ಲಿಂದ ಬಚಾವ್ ಮಾಡಿ ಇವರ ಕೈಯಲ್ಲಿ ಬಲಿಯಾಗುತ್ತಿದ್ದ ಹಾವುಗಳನ್ನು ಪಾರು ಮಾಡಿದ್ದೇನೆ. ಹಾಗಾಗಿ ಇವತ್ತೂ ಸಹ ಯಾವುದೋ ಹಾವು ಬಂದಿರಬೇಕು, ಇವನು ಅದಕ್ಕೆ ಡೈರೆಕ್ಷನ್ ತೋರಿಸುತ್ತಿರಬೇಕೆಂದು ತಿಳಿದು ನಾನಿದ್ದಲ್ಲಿಗೆ ಬಂದುಬಿಟ್ಟರು ನಮ್ಮ ಜನ್ಮದಾತೆ. ಆದರೆ ಅವರು ಊಹಿಸಿದಂತೆ ಸನ್ನಿವೇಶವಿರಲಿಲ್ಲ. ನಾನು ಮತ್ತದೇ ಜೇಡವು ಬಲೆ ನೇಯ್ಗೆ ಮಾಡುವುದನ್ನು ನೋಡುತ್ತಾ ನಿಂತೆ. ನಮ್ಮಮ್ಮ ನಾನಿದ್ದಲ್ಲಿಗೆ ಬಂದ ತಕ್ಷಣ ಆ ಜೇಡ ತನ್ನ ಕಾಯಕ ನಿಲ್ಲಿಸಿತು. “ಈ ಜಾಡುಳ ಜಾಡ್ ಕಟ್ಟುತ್ತಿರುವುದನ್ನು ಸುಮ್ನೆ ನೋಡ್ಕೊಂಡ್ ನಿಂತವ್ನೆ ಅದನ್ನು ಸಾಯ್ಸದ್ ಬಿಟ್ಟು. ಇಲ್ಲಿ ಮಕ್ಕಳು ಮರಿ ಓಡಾಡ್ತಾವೆ” ಎನ್ನುತ್ತಾ ಕಸ ಗುಡಿಸಲು ತಂದಿದ್ದ ಪೊರಕೆಯಲ್ಲಿ ಬಲೆಯನ್ನು ಜಾಡಿಸಿಯೇಬಿಟ್ಟರು. ನನಗೆ ಕೋಪ ನೆತ್ತಿಗೇರಿ ಅವರ ಕಡೆ ತಿರುಗಿ ನೋಡಿ “ಅದೇನ್ ಮಾಡ್ತು ನಿಮ್ಗೆ, ನಿಮ್ಮ ಮನೆಯೊಳಕ್ಕೆ ಬಂದಿದ್ಯಾ? ಅದರ ಪಾಡಿಗೆ ಅದು ಕೆಲಸ ಮಾಡಿಕೊಳ್ಳುತ್ತಿತ್ತು. ನಿಮಗೇನು ಮಾಡಕ್ಕೆ ಬೇರೆ ಕೆಲಸ ಇಲ್ವಾ?” ಎಂದು ರೇಗಿದೆ. ಕೋಪಿಸಿಕೊಂಡಿದ್ದ ನನಗೆ ಇನ್ನೂ ಹೆಚ್ಚು ಕೋಪ ಬರುವಂತೆ ಪ್ರತ್ಯುತ್ತರ ನೀಡುತ್ತಾ ನಮ್ಮಮ್ಮ “ಅವುಗಳ ಒಂದ್ ಫಾರಂ ಮಾಡ್ಕೊಂಡು ಸಾಕೊಂಡು ಬಿಡು. ಅವುಗಳ ಜೊತೆಲೇ ನೀನು ಇದ್ಬುಡು” ಎಂದು ಹೇಳಿ ಮನೆಯೊಳಕ್ಕೆ ಹೋಗಿಬಿಟ್ಟರು. ಮಾನವರು ತಾವೊಬ್ಬರೇ ಈ ಭೂಮಿಯಲ್ಲಿ ಬದುಕಬೇಕೆಂಬ ಹಂಬಲದಿಂದ ಯಾವುದೇ ತಪ್ಪು ಮಾಡದ ಪರೋಪಕಾರಿ ಜೀವಿಗಳನ್ನು ಸಹ ಅವಸಾನದ ಅಂಚಿಗೆ ತಳ್ಳುತ್ತಿದ್ದಾರೆ ಎಂದೆನಿಸಿತು. ಪರಿಸರ ವ್ಯವಸ್ಥೆಯಲ್ಲಿನ ಕೀಟ ನಿಯಂತ್ರಿಸುವಲ್ಲಿ ಜೇಡಗಳು ಪ್ರಮುಖವಾದ ಪಾತ್ರವಹಿಸಿವೆ. ಈ ಹುಲು ಮಾನವರಿಗೆ ಇವೆಲ್ಲಾ ಅರ್ಥವಾಗುವುದು ಯಾವಾಗ? ಎಂಬ ಪ್ರಶ್ನೆ ಮನದಲ್ಲಿ ಕಾಡತೊಡಗಿತು.

ಕೆಲವು ವರ್ಷಗಳ ಹಿಂದೆ ಆಸಕ್ತ ಕೃಷಿ ಮತ್ತು ಪರಿಸರ ಬರಹಗಾರರೊಂದಿಗೆ ಕೊಡಗಿನ ಅಧ್ಯಯನ ಪ್ರವಾಸಕ್ಕೆಂದು ಕೊಡಗಿಗೆ ಹೋಗಿದ್ದೆವು. ಕೊಡಗಿನ ಚಿಂಗಾರ ಹನಿವ್ಯಾಲಿ ಎಸ್ಟೇಟ್ನ ಅತಿಥಿ ಗೃಹದಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿದ್ದೆವು. ರಾತ್ರಿಯ ಊಟಕ್ಕೆಂದು ಎಲ್ಲರೂ ಊಟದ ಮನೆಯಲ್ಲಿ ಠಿಕಾಣಿ ಹೂಡಿದೆವು. ನನಗೆ ಶೀತವಿದ್ದ ಕಾರಣ ಬಿಸಿನೀರಿಗೆ ಬೇಡಿಕೆ ಇಡಲು ಅಡುಗೆ ಮನೆಗೆ ಹೋದೆನು. ನನಗೆ ಅಡುಗೆಮನೆ ನೋಡಿ ತುಂಬಾ ಖುಷಿಯಾಯಿತು. ಅಡುಗೆ ಮಾಡುವ ಜಾಗದಲ್ಲಿ ಜೇಡಗಳ ಬಲೆಯನ್ನು ನಾಶ ಮಾಡದೆಯೇ ಸ್ವಚ್ಛತೆಯಿಂದ ಇಟ್ಟುಕೊಂಡಿದ್ದರು. ನನಗೆ ಒಂದೆಡೆ ಇಂತಹ ಜೀವಸಂಕುಲ ಸ್ನೇಹಿ ಹೋಮ್ ಸ್ಟೇ ಮಾಲೀಕರುಗಳು ಇರುತ್ತಾರಾ!?… ಎಂದು ಆಶ್ಚರ್ಯಪಟ್ಟೆ. ಊಟದ ನಂತರ ಅತಿಥಿ ಗೃಹದ ಮಾಲೀಕರಾದ ಸುರೇಶ್ ಚೆಂಗಪ್ಪ ರವರನ್ನು ಭೇಟಿ ಮಾಡಿ ಜೇಡಗಳ ಬಗೆಗಿನ ಅವರ ಆಸಕ್ತಿಯನ್ನು ತಿಳಿಯಲು ಪ್ರಯತ್ನಿಸಿದೆ. ಅವರು ನಮಗೆ ಪ್ರತ್ಯುತ್ತರಿಸುತ್ತಿದ್ದರು. ಅಲ್ಲಿದ್ದ “ನಮ್ಮ ಹೋಂ ಸ್ಟೇಗೆ ಒಬ್ಬ ವಿದೇಶಿ ವ್ಯಕ್ತಿ ಬಂದಿದ್ದನು. ಅವನು 30 ವರ್ಷಗಳಿಂದ ಜೇಡಗಳ ಬಗ್ಗೆಯೇ ಅಧ್ಯಯನ ಮಾಡುತ್ತಿದ್ದಾನೆ. ಅವನು ಹೇಳಿದ ಜೇಡಗಳ ಬಗೆಗಿನ ಆಸಕ್ತಿಕರ ವಿಚಾರಗಳು ನನ್ನನ್ನು ಹೆಚ್ಚು ಪ್ರಭಾವಿಸಿದವು. ಮುಂಚೆಯೂ ಸಹ ನನಗೆ ಜೇಡಗಳ ಬಗ್ಗೆ ಸ್ವಲ್ಪ ಕುತೂಹಲವಿತ್ತು ಅವರು ಇಲ್ಲಿಗೆ ಬಂದು ಹೋದ ಮೇಲಂತೂ ಜೇಡಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಅವುಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುತ್ತಿದ್ದೇವೆ.” ಎಂದು ಹೇಳಿದರು. ಆ ವಿದೇಶಿಗ ಅಂದೆಂತಹ ಅಗಾಧ ಪರಿಸರ ಪ್ರೇಮಿ ಇರಬೇಕು!? ತನ್ನ ಜೀವಮಾನವಿಡೀ ಜೇಡಗಳ ಅಧ್ಯಯನಕ್ಕೆ ಮುಡುಪಾಗಿಟ್ಟಿದ್ದಾನೆ ಎಂದುಕೊಂಡು ಮನದಲ್ಲೇ ಶಭಾಷ್ಗಿರಿ ಅರ್ಪಿಸಿದೆನು. ಅಲ್ಲಿಂದ ನಾನು ಸಹ ಜೇಡಗಳ ಬಗ್ಗೆ ಇನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆ.

ಬೇಸಿಗೆ ಬಂತೆಂದರೆ ನಮ್ಮ ತೋಟಕ್ಕೆ ನೀರಿನ ಅಭಾವ ಪ್ರತಿವರ್ಷ ತಪ್ಪಿದ್ದಲ್ಲ. ಹಗಲು ರಾತ್ರಿ ಕರೆಂಟ್ ಬರುವುದನ್ನೇ ಕಾದುಕುಳಿತು ಎಲ್ಲಾ ಗಿಡಗಳಿಗೆ ನೀರು ಸಮವಾಗಿ ಹೋಗಲು ಗೇಟ್ವಾಲ್ ಬದಲಾಯಿಸುವುದಕ್ಕೆ ಹೆಣಗಾಡಬೇಕು. ಆ ದಿನ ಬೆಳಗ್ಗಿನ ಕರೆಂಟ್ ಶಿಫ್ಟ್ ಇದ್ದ ಕಾರಣ ಬೆಳ್ಳಂಬೆಳಗ್ಗೆ ತೋಟದ ಕಡೆ ನಡೆದು ಗೇಟ್ವಾಲ್ ತಿರುಗಿಸಿ ಎಲ್ಲಾ ಗಿಡಗಳಿಗೆ ನೀರು ಹೋಗುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ಅಡಿಕೆ ಮರಗಳ ಸಾಲುಗುಂಟ ಹೋಗುತ್ತಿದ್ದೆನು. ಬದುವಿನ ಹತ್ತಿರವಿದ್ದ ಕೊನೆ ಗಿಡದ ಬುಡದಲ್ಲಿ ಬಿಳಿ ಹತ್ತಿಯ ಬಟ್ಟೆಯಂತೆ ಅರಳಿಕೊಂಡಿದ್ದ ಬಲೆ ಕಾಣಿಸಿತು. ಅದರ ಮಧ್ಯೆ ಒಂದು ದೊಡ್ಡದಾದ ರಂಧ್ರವಿದ್ದು, ರಂಧ್ರದೊಳಗೆ ಕಪ್ಪಗೆ ಏನೋ ಅವಿತು ಕುಳಿತಂತೆ ಭಾಸವಾಯಿತು. ಸ್ವಲ್ಪ ಸಮಯ ಅಲ್ಲೇ ಕುಳಿತು ವೀಕ್ಷಿಸುತ್ತಿದ್ದೆ, ನನ್ನ ಕೈಯಿಂದ ಹಗುರವಾದ ಸ್ಪಂಜಿನಂತಹ ಬಲೆಯನ್ನು ಸ್ಪರ್ಶಿಸಿದ್ದೇ ತಡ ಒಳಗಿಂದ ಉದ್ದನೆಯ ಜೇಡವೊಂದು ರಂಧ್ರದ ಮೂಲಕ ಹೊರಗೆ ಬಂದು ಇಣುಕಿ ನೋಡಿ ಯಾವುದೇ ಮಿಕ ಬಿದ್ದಿಲ್ಲವೆಂದು ನಿರಾಶೆಯಿಂದ ಕ್ಷಣಾರ್ಧದಲ್ಲಿ ಒಳಹೊಕ್ಕಿತು. ನನಗೆ ಕುತೂಹಲ ಹೆಚ್ಚಾಗಿ ನನ್ನ ಕಾಲ ಮೇಲೆ ಕುಳಿತು ರಕ್ತವನ್ನು ಹೀರಲು ಹವಣಿಸುತ್ತಿದ್ದ ಸೊಳ್ಳೆಯನ್ನು ಬಡಿದು ಕೈಯಿಂದ ಸತ್ತ ಸೊಳ್ಳೆಯನ್ನು ಎತ್ತಿ ಆ ಸ್ಪಂಜಿನಂತ ಬಲೆಯ ಮೇಲೆ ಹಾಕಿದೆ. ಮತ್ತೆ ಸ್ಪರ್ಶವಾದ ಕ್ಷಣಮಾತ್ರದಲ್ಲಿ ಒಳಗೆ ಅವಿತು ಕುಳಿತ ಜೇಡವು ಹೊರಬಂದು ಸತ್ತ ಸೊಳ್ಳೆಯನ್ನು ನೋಡಿ ತನಗೆ ಬೇಡವಾದ ಆಹಾರ ಎಂಬಂತೆ ನಿರಾಕರಿಸಿ ಮತ್ತೆ ಒಳಹೊಕ್ಕಿ ಜೀವಂತ ಪ್ರಿಯವಾದ ಭೇಟಿಗಾಗಿ ಕಾಯುತ್ತಾ ಕುಳಿತಿತು. ಎಲ್ಲಾ ಪ್ರಭೇದದ ಜೇಡಗಳು ಒಂದೇ ರೀತಿಯ ಬಲೆಯನ್ನು ನೇಯುವುದಿಲ್ಲ. ವಿಭಿನ್ನ ರೀತಿಯಲ್ಲಿ ತನ್ನ ಆಹಾರದ ಜೀವಿಗಳನ್ನು ಬಲಿ ಹಾಕುತ್ತವೆ. ನಾನು ಮೇಲೆ ತಿಳಿಸಿದ್ದು ಹಿಪ್ಪಸ (Hippasa) ಜಾತಿಗೆ ಸೇರಿದ ಜೇಡ. ಇದು ನಾನು ಗಮನಿಸಿದಂತೆ ಹಗಲು ಮತ್ತು ರಾತ್ರಿ ಸಮಯದಲ್ಲೂ ಹೆಚ್ಚು ಸಕ್ರಿಯವಾಗಿರುತ್ತದೆ.

ಒಮ್ಮೆ ಮನೆಯ ಮುಂದಿನ ಹೂ ಗಿಡಗಳಿಗೆ ಬರುತ್ತಿದ್ದ ಚಿಟ್ಟೆಗಳನ್ನು ಗಮನಿಸುತ್ತಾ ಅವುಗಳು ಮಕರಂದ ಹೀರಲು ಹೂ ಮೇಲೆ ಕುಳಿತಾಗ ಫೋಟೋ ತೆಗೆಯಲು ಅವುಗಳ ಹಿಂದೆ ಹಿಂದೆ ಮೊಬೈಲ್ ಹಿಡಿದು ಓಡುತ್ತಿದ್ದೆ. ಮಾಸಲು ಬಣ್ಣದ ಒಂದು ಚಿಟ್ಟೆಯು ಚೆಂಡು ಹೂವಿನ ಆಕರ್ಷಣೆಗೆ ಒಳಗಾಗಿ ‘ಯಾರ ಹಂಗಿಲ್ಲ ನನ್ನ ಹಾರಾಟಕ್ಕೆ’ ಎಂಬಂತೆ ಹಳದಿ ಬಣ್ಣದ ಚೆಂಡು ಹೂವಿನ ಮೇಲೆ ಹೋಗಿ ಕುಳಿತುಕೊಂಡಿತು. ಇದರ ಹಿಂದೆ ಮೊಬೈಲಿನ ಕ್ಯಾಮೆರಾ ಆನ್ ಮಾಡಿಕೊಂಡು ಫೋಟೋ ಕ್ಲಿಕ್ಕಿಸಲು ಪ್ರಾರಂಭಿಸಿದೆನು. ಹತ್ತಿರದಲ್ಲೇ ಇದ್ದ ಮೊಬೈಲ್ಗೂ ಹೆದರದೆ ಸುಮ್ಮನೆ ಕುಳಿತು ಯಾವುದೇ ಚಲನವಲನವಿಲ್ಲದೆ ಸ್ತಬ್ಧವಾಯಿತು. ಅಯ್ಯೋ ಇದಕ್ಯಾವ ಗರ ಬಡಿಯಿತೆಂದು ಹೂವಿಗೆ ಇನ್ನೂ ಸ್ವಲ್ಪ ಸನಿಹವಾದೆ. ಆದರೆ ಅಲ್ಲಿ ಒಂದು ಅಚ್ಚರಿಯೇ ಕಾದಿತ್ತು. ಹೂವಿನೊಳಗೆ ಅವಿತು ಬೇಟೆಗಾಗಿ ಕಾಯುತ್ತಿದ್ದ ಜೇಡವೊಂದು ಚಿಟ್ಟೆಯ ತಲೆಯನ್ನೇ ಬಿಗಿಯಾಗಿ ಉಸಿರು ಕಟ್ಟುವಂತೆ ಹಿಡಿದು, ಬೇಟೆಗಾಗಿ ತನ್ನಲ್ಲಿದ್ದ ವಿಷವನ್ನು ಚಿಟ್ಟೆಯ ದೇಹಕ್ಕೆ ಸೇರಿಸಿ ಆಹಾರವಾಗಿಸಿಕೊಂಡಿತ್ತು. ಅಷ್ಟು ದೊಡ್ಡ ಚಿಟ್ಟೆಯು ಜೇಡದ ಸುಳಿವನ್ನೇ ಅರಿಯದೆ ಮಿಕವಾಗಿ ಹೋಯಿತು. ಈ ಜೇಡವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ತಿಳಿದದ್ದು ಇದು ಏಡಿಜೇಡವೆಂದು (Crab Spider). ವೈಜ್ಞಾನಿಕವಾಗಿ ಇದು ಥೋಮಿಸುಸ್ (Thomisus) ಜಾತಿಗೆ ಸೇರುತ್ತದೆ. ಈ ಜೇಡಗಳು ಹಗಲಿನಲ್ಲಿ ಸಕ್ರಿಯವಾಗಿದ್ದು, ಹೂವಿಗೆ ಬರುವ ಕೀಟಗಳು ಮತ್ತು ಪರಾಗಸ್ಪರ್ಶ ಮಾಡುವ ಜೀವಿಗಳೇ ಈ ಜೇಡಗಳ ಮುಖ್ಯವಾದ ಆಹಾರ.

ಹೀಗೆ ಜೇಡಗಳ ಬಗೆಗಿನ ನನ್ನ ಇನ್ನೂ ಕೆಲವು ಅನುಭವಗಳನ್ನು ಮುಂದಿನ ಸಂಚಿಕೆಯಲ್ಲಿ ಮುಂದುವರಿಸುತ್ತೇನೆ.
ಮುಂದುವರಿಯುತ್ತದೆ . . .
ಲೇಖನ: ಮಂಜುನಾಥ್ ಅಮಲಗೊಂದಿ
ತುಮಕೂರು ಜಿಲ್ಲೆ

ಪರಿಸರ ಸಮಾಜಕಾರ್ಯಕರ್ತರು.
ಪರಿಸರ, ವನ್ಯಜೀವಿ ಮತ್ತು ಸುಸ್ಥಿರ ಕೃಷಿಯ ಬಗ್ಗೆ ಬರೆಯುವ ಲೇಖಕರು.
ಅಧ್ಯಕ್ಷರು, ಚಿಗುರು ಯುವಜನ ಸಂಘ, ಅಮಲಗೊಂದಿ, ಸಿರಾ ತಾ.