ನೀವೂ ಕಾನನಕ್ಕೆ ಬರೆಯಬಹುದು

ಹುಲಿರಾಯ ನಮ್ಮ ರಾಷ್ಟ್ರೀಯ ಪ್ರಾಣಿ ಅ೦ತ ನನಗೂ ಗೊತ್ತು ಹಾಗೂ ನಿಮಗೂ ಗೊತ್ತು. ಆದರೆ ಹುಲಿರಾಯನನ್ನೇ ಏಕೆ ರಾಷ್ಟ್ರೀಯ ಪ್ರಾಣಿ ಆಗಿ ಮಾಡಿದ್ರು! ಅ೦ತ ನನಗಂತು ಗೊತ್ತಿರಲಿಲ್ಲ. ಇನ್ನೇನು ಮಾಡೋದು ಇನ್ನೂ ಗೂಗಲೇ ನನ್ನ ಗತಿ ಎ೦ದು, ಈ ವಿಷಯದ ಬಗ್ಗೆ ಹುಡುಕಿದೆ. ನೋಡಿದ್ರೆ ಆಶ್ಚರ್ಯಕರವಾದ ಸಂಗತಿಯೇ ಸಿಕ್ಕಿತು. ನಮಗೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಸಿಂಹವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ 1932ರಲ್ಲಿ ಸಿಂಹದ ಸ್ಥಾನವನ್ನು ಹುಲಿರಾಯ ಪಡೆದುಕೊಳ್ಳುತ್ತಾನೆ. ಆದರೆ ಕಾರಣ?, ನಮಗೆ ತಿಳಿದಿರುವ ಹಾಗೆ ಸಿಂಹಗಳು ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಮಾತ್ರ ಕಂಡು ಬರುತ್ತವೆ. ಆದರೆ ಹುಲಿರಾಯನ ಧೀಮಂತ ಹೆಜ್ಜೆ ದೇಶದ ಹಲವಾರು ಅರಣ್ಯ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಮುಖದಲ್ಲಿ ಕ್ರೌರ್ಯತೆ, ನಡುಗೆಯಲ್ಲಿ ಒಂದು ಗಾಂಭೀರ್ಯ, ಎಂತವರ ಎದೆಯಲ್ಲು ಜಲ್ ಎನಿಸುವ ತೀಕ್ಷ್ಣವಾದ ನೋಟ, ಕಣ್ಣಿಗೆ ಸಿಕ್ಕಿಬಿದ್ದ ಪ್ರಾಣಿಗಳನ್ನು ಬೆನ್ನತ್ತಿ ಭೇಟೆಯಾಡಿ, ಹೊಟ್ಟೆ ತುಂಬಿಸಿಕೊಂಡು ಅರಾಮಾಗಿ ನಿದ್ರಿಸುವ ಕೇಸರಿ ಬಣ್ಣ ಮೈಯುಳ್ಳ ಕಪ್ಪು ಪಟ್ಟೆಯ ಪ್ರಾಣಿ. ಎಲ್ಲಕ್ಕಿಂತ ಹೆಚ್ಚಾಗಿ ತನ್ನ ಶೌರ್ಯದಿಂದ ಕಾಡಿನರಾಜ ಎಂದೇ ಹೆಸರಾಗಿರುವ ಪ್ರಾಣಿ. ಮನುಷ್ಯನ ಕೆಲ ಚಟುವಟಿಕೆಗಳ ಕಾರಣದಿಂದ ಅದರ ಆವಾಸಗಳ ನಾಶ ಅವುಗಳ ಸಂಖ್ಯೆ ಕುಂಟಿತವಾಯಿತು. ಅವುಗಳ ಸಂರಕ್ಷಣೆ ಬಹಳ ಮುಖ್ಯವಲ್ಲವೇ, ಈ ಕಾರಣದಿಂದ ರಾಷ್ಟ್ರೀಯ ಪ್ರಾಣಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಕಾರಣಗಳು ಇಷ್ಟೇ ಅಲ್ಲ….


ನಮಗೆ ಸ್ವಾತಂತ್ರ್ಯ ಸಿಗುವ ಮುಂಚೆ ಅದೆಷ್ಟೋ ರಾಜಮನೆತಗಳು ನಮ್ಮ ದೇಶವನ್ನು ಆಳ್ವಿಕೆ ಮಾಡಿದ್ದಾರೆ. ಅದರಲ್ಲಿ ಮೊಘಲ್ ರಾಜಮನೆತನವು ಒಂದು. ಮೊಘಲ್ ದೊರೆ ಜಲಲ್-ಉದ್-ದಿನ್ ಮೊಹಮ್ಮದ್ ಅಕ್ಬರ್ ಹುಲಿಗಳನ್ನು ಬೇಟೆಯಾಡುವುದನ್ನು ರಾಜ ಮರ್ಯಾದೆ ಎಂದು ಪರಿಗಣಿಸಿದ. ಇದು ಮೊಘಲ್ ರಾಜಮನೆತನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಬೇರೆ ರಾಜಮನೆತನಗಳಿಗೂ ಈ ಹುಚ್ಚು ಹಬ್ಬಿತ್ತು. ಮುಂದೆ ಬ್ರಿಟೀಷರು ಇದನ್ನು ಮುಂದೆವರಿಸಿದರು. ನಮಗೆ ಸ್ವಾತಂತ್ರ್ಯ ಸಿಗುವ ಮುಂಚೆಯೇ, ಪಾಪ ಹುಲಿಗಳ  ಸ್ವಾತಂತ್ರ್ಯ ಮುಗಿದಿತ್ತು. ಅವುಗಳ ಸಂಖ್ಯೆ ತುಂಬಾ ಕ್ಷೀಣಿಸಿದ್ದವು. ಇಷ್ಟಲ್ಲದೇ ಹುಲಿಗಳ ಬೀಡುಗಳು ನಾಶವಾದವು. ಇದರಿಂದ ಹುಲಿ ಮತ್ತು ಮನುಷ್ಯರ ನಡುವೆ ಘರ್ಷಣೆ. ಇದಕ್ಕು ಹುಲಿಗಳೇ ಬಲಿಯಾದವು. ಮನುಷ್ಯರ ಆಸೆಗಳಿಗೆ ಮಿತಿಯೇ ಇಲ್ಲ. ಹುಲಿರಾಯನ ಮೂಳೆಗಳಲ್ಲಿ ಔಷಧಿಯ ಗುಣಗಳಿವೆ ಎಂದು ಅದನ್ನು ಸಾಯಿಸಿ, ನಮ್ಮ ನೆರೆಹೊರೆ ದೇಶಗಳಿಗೆ ರಫ಼್ತು ಮಾಡಿದರು. ಹುಲಿಯ ಚರ್ಮಕ್ಕೂ ಆಸೆ ಬಿದ್ದರು, ಕುರುಡು ಕಾಂಚಾಣದ ಹಿಂದೆ  ಹೋಗಿ. ಇವುಗಳೆಲ್ಲದರ ಪರಿಣಾಮದಿಂದ ಕ್ಷೀಣಿಸಿತು ಹುಲಿಗಳ ಸ೦ಖ್ಯೆ.

ಹೇಗಾದರು ಮಾಡಿ ಹುಲಿಗಳನ್ನು ಉಳಿಸಿಕೊಳ್ಳಬೇಕೆಂದು, ನಮ್ಮ ಭಾರತ ಸರ್ಕಾರ ಹುಲಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಮಾಡಿದರು. ಆದರೆ ಹುಲಿಗಳ ಸಂತತಿ ಮಾತ್ರ ನಶಿಸುತ್ತಲೇ ಇದೆ. ಹುಲಿಗಳ ಸಂರಕ್ಷಣೆ ಮಾಡಲು ಭಾರತ ಸರ್ಕಾರ 1973ರಲ್ಲಿ ಹುಲಿ ಸ೦ರಕ್ಷಣೆಯ ಯೋಜನೆಗಳನ್ನು ಜಾರಿಗೆ ತಂದರು. ಈ ಯೋಜನೆಯ ಅಡಿ ಎಷ್ಟೋ ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶಗಳಾಗಿ ಘೋಷಣೆ ಮಾಡಿದರು. ಹುಲಿಗಳನ್ನು ಬೇಟೆಯಾಡುಹುದು, ಅವುಗಳ ಜಾಗವನ್ನು ಭಂಗ ಮಾಡುವುದು ಕಾನೂನು ಬಾಹಿರವೆಂದರು. ಹುಲಿಯ ಸಂರಕ್ಷಣೆಗಾಗಿ ಎಷ್ಟೇ ಯೋಜನೆಗಳನ್ನು ಕೈಗೊಂಡರು, ಹುಲಿಗಳ ಸಂಖ್ಯೆ ಮಾತ್ರ ದಿನೇ ದಿನೇ ಕ್ಷೀಣಿಸುತ್ತಿದೆ. ಆದರೆ 2010ರಲ್ಲಿ ಮಾತ್ರ ಹುಲಿಗಳ ಸಂಖ್ಯೆ 1491ರಿಂದ 1706ರವರೆಗೆ ಏರಿದೆ. ಪ್ರಪಂಚದ 72% ಹುಲಿಗಳ ಸಂಖ್ಯೆ ನಮ್ಮ ದೇಶದಲ್ಲೇ ಇದೆ. ಇವುಗಳನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಆ ಒಂದು ಪ್ರಯತ್ನದಲ್ಲಿ ಕಾನನ ತಂಡದ ಒಂದು ಪುಟ್ಟ ಪ್ರಯತ್ನಕ್ಕೆ ನೀವೆಲ್ಲರು ಕೈ ಜೋಡಿಸಬಹುದು. ಹುಲಿ, ಹುಲಿಗಳ ಸಂರಕ್ಷಣೆ, ಅವುಗಳ ಆವಾಸಗಳು ಹೀಗೆ ಹುಲಿಗಳ ಸಂಬಂಧ ಪಟ್ಟ ಎಲ್ಲಾ ಲೇಖನಗಳು ಹಾಗೂ ಜೀವ ವೈವಿದ್ಯತೆ  ಕುರಿತ, ಕಾಡು, ಕಾಡಿನ ಕತೆಗಳು, ಜೀವ ವಿಜ್ಞಾನ, ವನ್ಯ ವಿಜ್ಞಾನ, ಕೀಟಲೋಕ, ಕೃಷಿ, ವನ್ಯಜೀವಿ ಛಾಯಾಚಿತ್ರಗಳು, ಕವನ (ಪರಿಸರಕ್ಕೆ ಸಂಬಂಧಿಸಿದ), ವರ್ಣಚಿತ್ರಗಳು ಮತ್ತು ಪ್ರವಾಸ ಕತೆಗಳು, ಪರಿಸರಕ್ಕೆ ಸಂಬಂಧ ಪಟ್ಟ ಎಲ್ಲಾ ಲೇಖನಗಳನ್ನು ಆಹ್ವಾನಿಸಲಾಗಿದೆ.

ಈ ಕೆಳಗಿನ ಇ-ವಿಳಾಸಕ್ಕೆ ಲೇಖನಗಳನ್ನು ಇದೆ ಜುಲೈ ತಿಂಗಳ ದಿನಾಂಕ 20ರೊಳಗೆ ನಿಮ್ಮ ಹೆಸರು ಮತ್ತು ವಿಳಾಸದೊಂದಿಗೆ

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.