ಜೈವಿಕ ಗಡಿಯಾರ ಬಲ್ಲಿರಾ?

© rawpixel.com
ಬೇಸಿಗೆ ರಜೆಯ ಮಜಾ ಮಾಡಲು ಬಂದು ಅದರ ಬಿಸಿಯಲ್ಲಿ ಬೆಂದು ಹೋದ ನೆನಪುಗಳೇ ಹೆಚ್ಚು ಈ ವರ್ಷ. ಆದರೆ ಈ ವರುಷದ ಬೇಗೆ ಹಿಂದಿನ ವರ್ಷದಷ್ಟು ಇಲ್ಲ ಬಿಡಿ. ಹಿಂದಿನ ವರ್ಷ ರಾಮ.. ರಾಮ.. ಕೇಳಬೇಡಿ. ಅಷ್ಟು ಬಿಸಿ. ನನ್ನ ಚಿಕ್ಕ ವಯಸ್ಸಿನಿಂದಲೂ ನೋಡದಂತಹ ಬಿಸಿ ಬಿಸಿ ಬೇಸಿಗೆ ಅದು. ಈ ವರ್ಷ ಹಿಂದೆ ಹೇಳಿದಂತೆ ಸ್ವಲ್ಪ ಕಡಿಮೆಯೇ. ಆದರೂ ಕೆಲಸದಲ್ಲಿರುವಾಗ ಇರುವ ನನ್ನ ನಿತ್ಯ ಸಾಮಾನ್ಯ ದಿನಚರಿಗೆ ಹೋಲಿಸಿದರೆ, ಈ ಬೇಸಿಗೆ ರಜೆಯ ದಿನಚರಿ ಸಂಪೂರ್ಣವಾಗಿ ಬೇರೆಯೇ; ಇಲ್ಲ-ಇಲ್ಲ ಖಚಿತವಾಗಿ ಹೇಳಬೇಕೆಂದರೆ ದಿನಚರಿಯೇ ಇರುವುದಿಲ್ಲ. ಏಕೆಂದರೆ ಬೆಳಿಗ್ಗೆ ಏಳುವುದು ರಾತ್ರಿ ಮಲಗುವ ಸಮಯದ ಮೇಲೆ ನಿಂತಿರುತ್ತದೆ. ತಿನ್ನುವ ಊಟ-ತಿಂಡಿಗಳು ಏಳುವ ಮತ್ತು ಮಲಗುವ ಸಮಯಗಳ ಮೇಲೇ ಅವಲಂಬಿತವಾಗಿರುತ್ತದೆ. ಹಾಗೆ ನೋಡಿದರೆ ನಾನು ಇವಾವುದನ್ನು ಸುಮಾರು 10 ದಿನಗಳ ಕಾಲ ನಿರ್ದಿಷ್ಟ ಸಮಯದಲ್ಲಿ ಮಾಡಲೇ ಇಲ್ಲ. ಅನಿಶ್ಚಿತ ದಿನಚರಿ ಜೊತೆಗೆ ತಿನ್ನುತ್ತಿದ್ದ ಆಹಾರ ಎಲ್ಲವೂ ಸೇರಿ ನನ್ನ ಮೇಲೆ ಸೇಡೇ ತೀರಿಸಿಕೊಂಡವು. ಹೇಗೆ ಎನ್ನುವಿರಾ? ರಜೆ ಇನ್ನೇನು ಮುಗಿಯುತ್ತಿದೆ ಅನ್ನುವಷ್ಟರಲ್ಲಿ ಅದು ನನ್ನ ದೇಹದ ಉಷ್ಣಾಂಶಗಳ ಮೇಲೆ ಪ್ರಭಾವ ಬೀರಿ, ಜೀರ್ಣ ಕ್ರಿಯೆಯ ಮೇಲೆ ಪ್ರಭಾವ ಬೀರಿ ಕೊನೆಗೆ ಒಂದೆರೆಡು ದಿನ ನಾನು ಸುಮ್ಮನೆ ಮನೆಯಲ್ಲಿ ಮಲಗಿರುವ ಹಾಗೆ ಮಾಡಿ ಬಿಟ್ಟಿತು. ಇದಕ್ಕೆ ಸಿಂಪಲ್ ಕಾರಣ ದೇಹದ ಉಷ್ಣ ಜಾಸ್ತಿ ಆಗಿ ಹೀಗೆ ಆಗಿದೆ ಎಂದು ನಾನೇ ಸಮರ್ಥಿಸಿಕೊಂಡರೂ, ಈ ಲೇಖನಕ್ಕೆ ಇಂಗ್ಲಿಷ್ ಲೇಖನ ಓದುತ್ತಾ ತಿಳಿಯಿತು ಅದಕ್ಕೆ ಮೂಲ ಕಾರಣ, ಅದು ನನ್ನ ದೇಹದ ‘ಜೈವಿಕ ಗಡಿಯಾರ’ದ ಬದಲಾವಣೆಯಿಂದ ಆದ ಅಚಾತುರ್ಯ ಎಂದು.

ನಿಮ್ಮಲ್ಲಿ ಕೆಲವರಿಗೆ ತಿಳಿದಿರುವಂತೆ, ಜೈವಿಕ ಗಡಿಯಾರ ಅಥವಾ ಬಾಡಿ ಕ್ಲಾಕ್ ಎಂದು ಕರೆಯಲ್ಪಡುವ ಒಂದು ಪ್ರಕ್ರಿಯೆ ನಮ್ಮ ದೇಹದಲ್ಲಿ ಇರುತ್ತದೆ. ಅಂದರೆ ನಾವು ಬೆಳಿಗ್ಗೆ ಸಾಮಾನ್ಯವಾಗಿ ಏಳುವ ಸಮಯ, ಊಟ ತಿಂಡಿಗಳನ್ನು ಮಾಡುವ ಸಮಯ, ಮಲಗುವ ಸಮಯ, ನಿದ್ದೆ ಮಾಡುವ ಒಟ್ಟು ಸಮಯ. ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಇವುಗಳು ಸಾಮಾನ್ಯವಾಗಿ ಒಂದು ದಿನಚರಿಯಂತೆ ಇರುತ್ತವೆ. ಇದನ್ನು ನಾವೇನಾದರೂ ಕಾರಾಣಾಂತರಗಳಿಂದ ಬದಲಾಯಿಸಿದರೆ, ನಮ್ಮ ದೇಹದ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಅರೇ… ಇದು ನಮಗೂ ತಿಳಿದಿದೆಯಲ್ಲಾ.. ಇದರಲ್ಲಿ ಹೊಸತೇನಿದೆ? ಎಂದು ಹೇಳುವುದಾದರೆ ಇಲ್ಲಿ ಕೇಳಿ, ಸಾಮನ್ಯವಾಗಿ ನಮ್ಮ ದೇಹದ ಜೈವಿಕ ಗಡಿಯಾರದ ಸಮಯ ಬದಲಾದರೆ ಅದು ನಮ್ಮ ಮನಸ್ಥಿತಿ ಹಾಗೂ ನಮ್ಮ ಆಹಾರ ಸೇವಿಸುವ ಸಮಯದ ಮೇಲೆ ಅಥವಾ ಹೊಟ್ಟೆ ಹಸಿಯುವ ಸಮಯಗಳು ಬದಲಾಗಬಹುದು ಅಂದುಕೊಳ್ಳುತ್ತೇವೆ. ಅದು ನಿಜವೇ. ಈ ವಿಚಾರವಾಗಿ ಮಾನವಶಾಸ್ತ್ರಜ್ಞ ಡೇವಿಡ್ ಸ್ಯಾಂಸನ್ ಹೇಳುವುದೇನೆಂದರೆ, ನಮ್ಮ ಪೂರ್ವಜರ ಕಾಲದಿಂದಲೂ ನಡೆದು ಬಂದ ಒಂದು ವಿಷಯವೆಂದರೆ ಅದು, ಬೆಳಿಗ್ಗೆ ಸೂರ್ಯನಿರುವಾಗ ಕೆಲಸ ಮತ್ತು ಸಂಜೆ ನಕ್ಷತ್ರಗಳ ಕೆಳಗೆ ನಿದ್ದೆ. ಆದರೆ ಈ ನವಯುಗದ ಬೆಳವಣಿಗೆಯಲ್ಲಿ ನಮ್ಮ ಜೈವಿಕ ಗಡಿಯಾರ ದಿಕ್ಕು ದೆಸೆಯಿಲ್ಲದೆ ತಿರುಗುತ್ತಿದೆ. ಕಾರಣ ಬದಲಾದ ಕೆಲಸಗಳ ವೈಖರಿ (ಡೇ–ನೈಟ್ ಶಿಫ್ಟ್), ಬೇರೆ ಬೇರೆ ಟೈಮ್ ಜೋನ್ಗಳ ಪ್ರವಾಸ, ವಿದ್ಯುತ್ ಬಂದ ಮೇಲೆ ಬದಲಾದ ದಿನಚರಿಗಳು. ಹೀಗೆ ಹತ್ತು ಹಲವಾರು ಕಾರಣಗಳಿಂದ ನಮ್ಮ ದೇಹದ ಜೈವಿಕ ಗಡಿಯಾರ ಬದಲಾಗಿ ನಮ್ಮ ದೇಹದ ಮೇಲೆ ತೀವ್ರವಾಗೆ ಪ್ರತಿಕ್ರಿಯಿಸುತ್ತಿವೆ. ಹೇಗೆ ಎಂದಿರೇನು..? ನಮ್ಮ ದೇಹದಲ್ಲಿ ಉತ್ಪತ್ತಿ ಆಗುವ ನಮ್ಮ ದೇಹದ ಆರೋಗ್ಯಕರ ಕ್ರಿಯೆಗೆ ಅತಿ ಮುಖ್ಯವಾದ ಹಾರ್ಮೋನ್ ಗಳ ಉತ್ಪತ್ತಿಯಲ್ಲಾಗುವ ಬದಲಾವಣೆ. ಅದು ಇಡೀ ದೇಹದ ಮೇಲೆ ಪರಿಣಾಮ ಬೀರಬಲ್ಲದು. ಇದು ಮಾನಸಿಕ ಖಿನ್ನತೆ, ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗಿದೆ ಎನ್ನುತ್ತಾರೆ.

ಸ್ಯಾಮ್ಸನ್ ಅವರು 1967 ರಿಂದ 2022 ಸಮಯದಲ್ಲಿ ಸುಮಾರು 21 ದೇಶಗಳ 51,000 ಜನರ ಮೇಲೆ ನಡೆಸಿದ 54 ವಿಧದ ನಿದ್ದೆಯ ಪ್ರಯೋಗದ ಮಾಹಿತಿಯನ್ನು ಗಮನಿಸಿದಾಗ ಅವರಿಗೆ ತಿಳಿದದ್ದು, ನಾವು ಎಷ್ಟು ಸಮಯ ನಿದ್ರಿಸುತ್ತೇವೆ ಎನ್ನುವುದಕ್ಕಿಂತ, ಮಲಗುವ ಸಮಯ ಹಾಗೂ ಏಳುವ ಸಮಯ ಮುಖ್ಯವೆನ್ನುತ್ತಾರೆ. ಅದರಲ್ಲಿದ್ದ ಮಾಹಿತಿಯ ಪ್ರಕಾರ ಕೈಗಾರಿಕಾ ವೃತ್ತಿಯಲ್ಲಿ ತೊಡಗಿದ್ದ ಜನ ಸರಾಸರಿ 7.1 ಘಂಟೆಗಳ ಕಾಲ ನಿದ್ದೆ ಮಾಡುತ್ತಾರೆ. ವಿದ್ಯುತ್ ಇಲ್ಲದ ಕೈಗಾರಿಕ ವೃತ್ತಿಯಲ್ಲಿ ಕೆಲಸದಲ್ಲಿರದ ಜನ ಸರಾಸರಿ 6.4 ಘಂಟೆಗಳ ಕಾಲ ನಿದ್ರಿಸುತ್ತಾರೆ. ಇವರು ಹೋಲಿಕೆಯಲ್ಲಿ 42 ನಿಮಿಷಗಳ ಕಾಲ ಕಡಿಮೆ ನಿದ್ದೆ ಮಾಡಿದರೂ ಇವರ ಜೈವಿಕ ಗಡಿಯಾರ ಸೂರ್ಯನಿಗೆ ಹೊಂದಾಣಿಕೆ ಆಗುವುದರಿಂದ ಹೆಚ್ಚು ಆರೋಗ್ಯಕರವಾಗಿ ಇರುವರು ಎಂದು ಇವರ ವಾದವಾದರೆ, ನರಶಾಸ್ತ್ರಜ್ಞ ಹೊರಾಸಿಯೋ ಇದನ್ನು ಒಪ್ಪುವುದಿಲ್ಲ. ಅವರು ಹೇಳುವ ಹಾಗೆ ನಾವು ನಿದ್ದೆ ಮಾಡುವ ಸಮಯ ಮತ್ತು ನಮ್ಮ ಜೈವಿಕ ಗಡಿಯಾರಕ್ಕೆ ಸೂಕ್ಷ್ಮ ಸಂಬಂಧ ಇರುವುದಾದರೂ ಅದು ವಾತಾವರಣ ಹಾಗೂ ಕೆಲಸ ಮಾಡುವ ಜೀವನ ಶೈಲಿಗೆ ತಕ್ಕಂತೆ ಸ್ವಲ್ಪ ವ್ಯತ್ಯಾಸವಿರುತ್ತದೆ. ಹಾಗಾಗಿ ಒಂದು ನಿರ್ದಿಷ್ಟ ಸಮಯ ಕೆಲಸಕ್ಕೆ ಹಾಗೂ ನಿದ್ದೆಗೆ ಇಡುವುದು ಒಳಿತಾದರೂ, ನಿದ್ದೆ ಮಾಡುವ ಸಮಯ ಕಡಿಮೆ ಆಗಬಾರದು, ಉದಾಹರಣೆಗೆ ರಾತ್ರಿ 1.00 ಘಂಟೆಯವರೆಗೆ ಕೆಲಸ ಮಾಡುವ ಕೆಲಸಗಾರನಿಗೆ 8 ಘಂಟೆಗಳ ನಂತರ ಏಳುವ ಅವಕಾಶವಿರಬೇಕು. ಹಾಗೂ ಮಲಗುವ ಜಾಗದಲ್ಲಿನ ಬೆಳಕು ಹಾಗೂ ಉಷ್ಣಾಂಶಗಳು ಬೆಳಗಿನ ಮತ್ತು ರಾತ್ರಿ ಸಮಯಗಳನ್ನು ಹೋಲುವ ಹಾಗೆ ಇರಬೇಕು. ಅಂದರೆ ಬೆಚ್ಚಗಿನ ಹಾಗೂ ನೀಲಿ ಮಿಶ್ರಿತ ವಾತಾವರಣ ಬೆಳಗಿನ ಸಮಯದಲ್ಲಿ; ತಣ್ಣಗಿನ ಕೆಂಪು ಮಿಶ್ರಿತ ಮಂದ ಬೆಳಕಿನ ವಾತಾವರಣ ರಾತ್ರಿಯಲ್ಲಿ ಇರಬೇಕು.
ಸ್ವಾಭಾವಿಕವಾಗಿ ನಮ್ಮ ದೇಹವೂ ಸಹ ನಮ್ಮ ಸಾವಿರಾರು ವರುಷಗಳ ಹಿಂದಿನ ಪೀಳಿಗೆಯ ಪೂರ್ವಜರ ಹಾಗೆ ಸಾಮಾನ್ಯ ಜೈವಿಕ ಗಡಿಯಾರವನ್ನು ಹೊಂದಿರುವೆವಾದರೂ, ಕಾರಾಣಾಂತರಗಳಿಂದ ಅದನ್ನು ಮನಸೋ ಇಚ್ಛೆ ತಿಳಿದೋ – ತಿಳಿಯದೆಯೋ ಬಹುತೇಕ ಬದಲಾಯಿಸಿಕೊಂಡಿದ್ದೇವೆ. ಈ ವಿಚಾರಗಳು ತಿಳಿದ ನಂತರವಾದರೂ ಅದನ್ನು ಬದಲಿಸುವಲ್ಲಿ ನಾವು ಒಲವು ತೋರದಿದ್ದರೆ ಆಗುವ ಪರಿಣಾಮ ನಮ್ಮ ಪಕ್ಕದವರಿಗಲ್ಲ, ನಮಗೆ ಮರೆಯದಿರಿ!
ಏನೇ ಆದರೂ ನಾವು ಮಾಡುವ ಕೆಲಸ, ಪಡುವ ಶ್ರಮ, ಗಿಟ್ಟಿಸಿಕೊಳ್ಳುವ ಸಂಬಳ ಏತಕ್ಕಾಗಿ? ನಮ್ಮ ತನು-ಮನ ಆರೋಗ್ಯ ಹಿತಕ್ಕಾಗಿಯೇ ಅಲ್ಲವೇ? ಅದನ್ನೇ ಒತ್ತೆ ಇಟ್ಟು ಮಾಡಿಕೊಳ್ಳುವ ದಿನಚರಿ ಯಾವ ಪ್ರಯೋಜನಕ್ಕೆ?
Source: www.snexplores.org
ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.